ಕೋವಿಡ್‌ ಸಾವಿನ ಪರಿಹಾರ ವ್ಯಾಪ್ತಿಗೊಳಪಡದ ಇಡಬ್ಲ್ಯೂಎಸ್‌ ವರ್ಗ; ಸರ್ಕಾರದಿಂದಲೇ ತಾರತಮ್ಯ

ಬೆಂಗಳೂರು; ಕೋವಿಡ್‌ ಸೋಂಕಿನಿಂದ ಮೃತರಾದ ಬಡತನ ರೇಖೆಗಿಂತ ಕೆಳಗಿನವರಿಗೆ ಪರಿಹಾರ ನೀಡಲು ಕಡೆಗೂ ದ್ವಂದ್ವದಿಂದ ಹೊರ ಬಂದಿರುವ ರಾಜ್ಯ ಬಿಜೆಪಿ ಸರ್ಕಾರವು ಆದಾಯ ಕಡಿಮೆ ಇರುವ ವರ್ಗ (ಇಡಬ್ಲ್ಯೂಎಸ್‌) ವನ್ನು ಪರಿಗಣಿಸಲು ಇನ್ನೂ ಯಾವುದೇ ನಿರ್ಧಾರ ತಳೆದಿಲ್ಲ.

ಬಿಪಿಎಲ್‌, ಎಪಿಎಲ್‌ ವ್ಯಾಪ್ತಿಯೊಳಗಿರುವ ಕುಟುಂಬ ಸದಸ್ಯ ಕೋವಿಡ್‌ ಸೋಂಕಿನಿಂದ ಮರಣ ಹೊಂದಿದ್ದಲ್ಲಿ ಪರಿಹಾರ ನೀಡುವ ಸಂಬಂಧ ಎರಡೆರಡು ಆದೇಶ ಹೊರಡಿಸಿದೆ. ಆದರೆ ಪರಿಹಾರದ ವ್ಯಾಪ್ತಿಯೊಳಗೆ ಇಡಬ್ಲ್ಯೂಎಸ್‌ ವರ್ಗವನ್ನು ಪರಿಗಣಿಸುವ ಪ್ರಸ್ತಾಪವೇ ಇಲ್ಲ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಸದನಕ್ಕೆ ನೀಡಿದ್ದ ಉತ್ತರ ಇದೀಗ ಮುನ್ನೆಲೆಗೆ ಬಂದಿದೆ.

ಕೋವಿಡ್‌ನಿಂದಾಗಿ ಮರಣ ಹೊಂದಿದ ವ್ಯಕ್ತಿ ಬಿಪಿಎಲ್‌ ಕಾರ್ಡ್‌ದಾರನಾಗಿರಬೇಕೆಂಬ ಮಾರ್ಗಸೂಚಿಯಿಂದ ಶೇ. 50ಕ್ಕಿಂತ ಹೆಚ್ಚು ಜನ ಸಮಸ್ಯೆಯಲ್ಲಿ ಸಿಲುಕಿದ್ದು ಇಡಬ್ಲ್ಯೂಎಸ್‌ ನಿಯಮಗಳ ರೀತಿಇಯಲ್ಲಿ ಆದಾಯ ಕಡಿಮೆ ಇದ್ದವರಿಗೆ ಆದಾಯ ಪತ್ರವನ್ನು ಪಡೆದು ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತು ಕೃಷ್ಣರಾಜ ನಗರದ ಶಾಸಕ ಎಸ್‌ ಎ ರಾಮದಾಸ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಅಶೋಕ್‌ ಅವರು ಇಡಬ್ಲ್ಯೂಎಸ್‌ ವರ್ಗವನ್ನು ಪರಿಗಣಿಸುವ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ.

‘ಪ್ರಸ್ತುತ ಬಿ ಪಿ ಎಲ್‌ ಕುಟುಂಬಕ್ಕೆ ಸೇರಿದ ವ್ಯಕ್ತಿ ಕೋವಿಡ್‌ನಿಂದಾಗಿ ಮೃತ ಹೊಂದಿದಲ್ಲಿ ಕುಟುಂಬದ ವಾರಸುದಾರರಿಗೆ ಪರಿಹಾರವನ್ನು ನೀಡಲಾಗುತ್ತಿದ್ದು, ಸದ್ಯಕ್ಕೆ ಇಡಬ್ಲ್ಯೂಎಸ್‌ ವರ್ಗವನ್ನು ಪರಿಗಣಿಸುವ ಪ್ರಸ್ತಾವನೆಯೇ ಇರುವುದಿಲ್ಲ,’ ಎಂದು ಉತ್ತರಿಸಿದ್ದಾರೆ.

ಸರ್ಕಾರ ನೀಡಿರುವ ಅಂಕಿ ಅಂಶದ ಪ್ರಕಾರ 2021ರ ಸೆ.5ರ ಅಂತ್ಯಕ್ಕೆ ರಾಜ್ಯದಲ್ಲಿ 37,409 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 16,024 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 1,589, ಹಾಸನದಲ್ಲಿ 1,229, ಮೈಸೂರಿನಲ್ಲಿ 2,367, ಶಿವಮೊಗ್ಗದಲ್ಲಿ 1,075, ತುಮಕೂರಿನಲ್ಲಿ 1,099 ಮಂದಿ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 37,409 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಪರಿಹಾರಕ್ಕಾಗಿ ರಾಜ್ಯದ 30 ಜಿಲ್ಲೆಗಳಲ್ಲಿ ಈವರೆವಿಗೆ 7,711 ಅರ್ಜಿಗಳು ಮಾತ್ರ ಸ್ವೀಕೃತವಾಗಿದೆ ಎಂದು ಆರ್‌ ಅಶೋಕ್‌ ಅವರು ಉತ್ತರಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 950 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 445, ಧಾರವಾಡ ಜಿಲ್ಲೆಯಲ್ಲಿ 434, ಹಾಸನ ಜಿಲ್ಲೆಯಲ್ಲಿ 443, ಕೊಪ್ಪಳದಲ್ಲಿ 633, ಮೈಸೂರು ಜಿಲ್ಲೆಯಲ್ಲಿ 783 ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನು, ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿಕೆ ಸಂಬಂಧ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸ್ಪಷ್ಟತೆಯೇ ಇರಲಿಲ್ಲ. ಕೋವಿಡ್‌ ಸೋಂಕಿನಿಂದ ಮೃತರಾದ ಬಡತನ ರೇಖೆಗಿಂತ ಕೆಳಗಿರುವವರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನೂ ಹಿಂಪಡೆದು ಪರಿಷ್ಕೃತವಾದ ಮತ್ತೊಂದು ಆದೇಶವನ್ನು ಹೊರಡಿಸಿತ್ತು.

ಕೋವಿಡ್‌ನಿಂದ ಮೃತ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡುವ ಸಂಬಂಧ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಸೆ.28ರ ಒಂದೇ ದಿನದಲ್ಲಿ ಎರಡೆರಡು ಆದೇಶಗಳನ್ನು ಹೊರಡಿಸಿದೆ. 1 ಲಕ್ಷ ರು.ಪರಿಹಾರ ಆದೇಶವನ್ನು ಹಿಂಪಡೆದುಕೊಳ್ಳುವ ಸಂಬಂಧ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದರು.

ಈ ಅದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿದ್ದರಿಂದಾಗಿ ದಿಢೀರ್‌ ಎಂದು ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಉಪ ಕಾರ್ಯದರ್ಶಿ ಕೆ ಸಿ ಕುಮಾರ್‌ ಅವರು ಮತ್ತೊಂದು ಆದೇಶವನ್ನು ಹೊರಡಿಸಿದ್ದರು.

ಪರಿಷ್ಕೃತ ಆದೇಶದಲ್ಲೇನಿದೆ?

ರಾಜ್ಯ ಸರ್ಕಾರದಿಂದ ಸಂಧ್ಯಾ ಸುರಕ್ಷಾ ಯೋಜನೆಯ ಲೆಕ್ಕ ಶೀರ್ಷಿಕೆಯಡಿ 1 ಲಕ್ಷ ರು.ಗಳನ್ನು ನೇರ ನಗದು ವರ್ಗಾವಣೆ ಮತ್ತು ಕೇಂಧ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ತಲಾ 50 ಸಾವಿರ ರು.ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿಸಬೇಕು ಎಂದು ಆದೇಶಿಸಿದ್ದರು.

ಅಲ್ಲದೆ ಬಿಪಿಎಲ್‌ ಹೊರತುಪಡಿಸಡಿದ (ಎಪಿಎಲ್‌ ಮತ್ತು ಇತರೆ) ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದಲ್ಲಿ ಅಂತಹ ಕುಟುಂಬಕ್ಕೆ ಎಸ್‌ಡಿಆರ್‌ಎಫ್‌ ಅಡಿ ಮೃತ ಸಂಖ್ಯೆಗೆ ಅನುಗುಣವಾಗಿ 5ಲಾ 50 ಸಾವಿರ ರು.ಗಳನ್ನು ಪಾವತಿಸಬೇಕು ಎಂದೂ ಪರಿಷ್ಕೃತ ಆದೇಶದಲ್ಲಿ ಹೇಳಲಾಗಿತ್ತು.

ಕೋವಿಡ್‌ ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50,000 ರು.ಗಳ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸೂಚನೆ ಬಂದ ಹಿನ್ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ 2021ರ ಸೆ.23ರಂದು ಹೊರಡಿಸಿದ್ದ ಆದೇಶವನ್ನೇ ಹಿಂಪಡೆದುಕೊಂಡಿದೆ. ಈ ಸಂಬಂಧ 2021ರ ಸೆ.28ರಂದು ಪರಿಷ್ಕೃತ ಆದೇಶ ಹೊರಡಿಸಿತ್ತು.

ಕೋವಿಡ್‌ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಅರ್ಹ ಸಂತ್ರಸ್ತ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರು.ಗಳನ್ನುಪಾವತಿಸಲು ಆದೇಶಿಸಿತ್ತು.

‘ಕೇಂದ್ರ ಗೃಹ ಸಚಿವಾಲಯದ 2021 ಸೆ.25ರ ನಿರ್ದೇಶನದಂತೆ ಕೋವಿಡ್‌-19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50,000 ರು. ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿರುವುದರಿಂದ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಚೆಕ್ ಮೂಲಕ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆ.23ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ,’ ಎಂದು ಸೆ.28ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿತ್ತು.

ಕೋವಿಡ್‌ ಸೋಂಕು ದೃಢವಾದ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳು ಕೂಡ 50,000 ಪರಿಹಾರ ಧನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಮೃತರು ಕೋವಿಡ್‌ ಬಾಧಿತರು ಎಂದು ಸಾಬೀತಾಗಿರಬೇಕು. ಆಗ ಅವರ ಕುಟುಂಬ ಕೂಡಾ ಪರಿಹಾರ ಧನ ಪಡೆಯಲು ಅರ್ಹವಾಗಿರುತ್ತದೆ ಎಂದು ಕೋರ್ಟ್ ಹೇಳಿತ್ತು.

ಈ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿರುವ ಗೃಹ ಸಚಿವಾಲಯ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿತ್ತು.ಕೋವಿಡ್–19ನಿಂದ ಮೃತಪಟ್ಟವರ ಮರಣ ಪತ್ರದಲ್ಲಿ ‘ಕೋವಿಡ್‌ ಕಾರಣದಿಂದ ಆತ್ಮಹತ್ಯೆ’ ಎಂಬ ಅಂಶವನ್ನು ನಮೂದು ಮಾಡದೇ ಇರುವ ಕುರಿತು ಪುನರ್‌ವಿಮರ್ಶೆ ಮಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡಲು ‘ಆತ್ಮಹತ್ಯೆ’ ಎಂಬುದರ ಉಲ್ಲೇಖ ಅತಿಮುಖ್ಯ ಎಂದು ಸೆ.13ರಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿತ್ತು. ಕೋರ್ಟ್‌ ಎತ್ತಿರುವ ಕಳಕಳಿ ಕುರಿತು ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದನ್ನು ಸ್ಮರಿಸಬಹುದು.

ಕೋವಿಡ್‌ನಿಂದ ಬಳಲುತ್ತಿರುವ ವೇಳೆಯೇ, ವಿಷ ಪದಾರ್ಥ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಆತ್ಮಹತ್ಯೆಯಿಂದ ಸಂಭವಿಸಿದ ಸಾವುಗಳನ್ನು ಕೋವಿಡ್‌ನಿಂದ ಸಂಭವಿಸಿದ ಸಾವುಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್‌ ಇದಕ್ಕೂ ಮೊದಲು ಜಂಟಿಯಾಗಿ ಮಾರ್ಗಸೂಚಿ ಹೊರಡಿಸಿತ್ತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕೋವಿಡ್‌–19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಭರಿಸಬೇಕು. ಜೂನ್‌ 30ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಾರ್ಗಸೂಚಿ ರೂಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts