ಬೊಕ್ಕಸಕ್ಕೆ 4,109 ಕೋಟಿ ರು.ನಷ್ಟವಾದರೂ ಸದನದಲ್ಲಿ ಚರ್ಚೆಯಾಗುವುದಿಲ್ಲವೇಕೆ?

ರಾಯಚೂರಿನ ಯರಮರಸ್‌ ಉಷ್ಣ ವಿದ್ಯುತ್‌ ಸ್ಥಾವರ ಕಾಮಗಾರಿ ಅನುಷ್ಠಾನ ವಿಳಂಬದಿಂದ ಯೋಜನಾ ವೆಚ್ಚದಲ್ಲಿ ಬರೋಬ್ಬರಿ 4,109.67 ಕೋಟಿ ರೂ. ಹೆಚ್ಚಳವಾಗಿ ಬೊಕ್ಕಸಕ್ಕೆ ನಷ್ಟವಾಗಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ 2017 – 2018ನೇ ವರ್ಷ) ವರದಿ ಹೊರಗೆಡವಿದೆ.
ಮಹಾಲೆಕ್ಕ ಪರಿಶೋಧಕರು ಪ್ರತಿ ವರ್ಷವೂ ಮಂಡಿಸುವ ವರದಿ ರಾಜಕೀಯಕರಣಗೊಂಡರಷ್ಟೇ ಸದನಗಳಲ್ಲಿ ಚರ್ಚೆಯಾಗುತ್ತದೆಯೇ ಹೊರತು ಉಭಯ ಸದನಗಳಲ್ಲಿ ಗಂಭೀರವಾಗಿ ಚರ್ಚೆಯಾಗುವುದಿಲ್ಲ. ಹೀಗಾಗಿ ಯಾವ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗುವುದಿಲ್ಲ. ವರದಿ ಆಧರಿಸಿ ಕಾರ್ಯನಿರ್ವಹಿಸುವ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಂಬಂಧಿಸಿದ ಇಲಾಖೆಗೆ ಪತ್ರ ವ್ಯವಹಾರ ನಡೆಸುತ್ತದೆಯೇ ವಿನಃ ಈ ಸಮಿತಿಯೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ.
2017-18ರಲ್ಲಿ ಪ್ರಾರಂಭಗೊಂಡಿದ್ದ ಯರಮರಸ್‌ ಯೋಜನೆ, ಕೇಂದ್ರ ಪರಿಸರ ಇಲಾಖೆಯ ಷರತ್ತನ್ನು ಇನ್ನೂ ಪೂರೈಸಿಲ್ಲ.2009ರ ಏಪ್ರಿಲ್‌ನಲ್ಲಿ ಅಂದಾಜಿಸಿದ್ದಂತೆ ಈ ಯೋಜನೆಗೆ 8,806.23 ಕೋಟಿ ರೂ. ವೆಚ್ಚವಾಗುತ್ತಿತ್ತು. ಇದು 2018ರ ಮಾರ್ಚ್ ವೇಳೆಗೆ 12,915.90 ಕೋಟಿ ರೂ.ಗೆ ಏರಿಕೆಯಾಯಿತು. ಇದರಿಂದಾಗಿ ಯೋಜನಾ ವೆಚ್ಚದಲ್ಲಿ 4,109.67 ಕೋಟಿ ರೂ. ಹೆಚ್ಚಳಕ್ಕೆ ಕಾರಣವಾಗಿದೆ.
ಇದಲ್ಲದೆ ಕಲ್ಲಿದ್ದಲು ನಿರ್ವಹಣಾ ಸ್ಥಾವರ ನಿರ್ಮಾಣಕ್ಕೆ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ಗೆ ಭೂಮಿ ವಹಿಸಲು ವಿಳಂಬ ಮಾಡಿದ್ದರಿಂದಲೂ ತೊಂದರೆಯಾಯಿತು. ರೈಲ್ವೆ ಉಪ ಮಾರ್ಗ ಲಭ್ಯವಿಲ್ಲದ್ದರಿಂದ ರಸ್ತೆ ಮೂಲಕ ಕಲ್ಲಿದ್ದಲು ಸಾಗಿಸಿದ್ದರಿಂದ 2017-18ರಲ್ಲಿ 24.40 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸುವಂತಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಕೈತಪ್ಪಿದ 821 ಕೋಟಿ ರೂ.
ಎಚ್‌ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ನೀರಾವರಿ ಯೋಜನೆಗೆ ಕೇಂದ್ರದ ನೆರವು ಒದಗಿಸಲು ಎಐಬಿಪಿ ಯೋಜನೆ ತಂದಿದ್ದರು. ಆದರೆ, ಕಾಲಾನಂತರದಲ್ಲಿ ಈ ಯೋಜನೆ ಲಾಭ ಪಡೆಯುವಲ್ಲಿ ಕರ್ನಾಟಕವೇ ವಿಫಲವಾಗಿರುವುದನ್ನೂ ಈ ವರದಿ ಬಹಿರಂಗಗೊಳಿಸಿದೆ. 2013-18ರ ಅವಧಿಯಲ್ಲಿ ಕೆಬಿಜೆಎನ್‌ಎಲ್‌ ಹಾಗೂ ಕೆಎನ್‌ಎನ್‌ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸದೇ ಇರುವುದರಿಂದ ರಾಜ್ಯಕ್ಕೆ 821.86 ಕೋಟಿ ರೂ. ಬರುವುದು ಕೈತಪ್ಪಿ ಹೋಗಿದೆ.
ಜತೆಗೆ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ ಸರಕಾರ ನೀಡಿದ ಅನುದಾನದ ಸಮರ್ಪಕ ಬಳಕೆಯಾಗದಿರುವುದು ಹಾಗೂ ಈ ಉದ್ಯಮಗಳು ನಷ್ಟ ಉಂಟು ಮಾಡುತ್ತಿರುವುದನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಂಗಲ್‌ ಲಾಡ್ಜಸ್‌ನಲ್ಲಿಅನುದಾನ ಬಳಸಿಕೊಳ್ಳದಿರುವುದು, ತೆಂಗಿನನಾರು ಅಭಿವೃದ್ಧಿ ನಿಗಮದಲ್ಲಿನ ನೆರವನ್ನು ನಿಯಮ ಬಾಹಿರ ವರ್ಗಾವಣೆ ಮಾಡಿರುವುದು, ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ನಿಂದ ದಂಡದ ಮೇಲಿನ ಬಡ್ಡಿ ಪಾವತಿಸಿರುವುದನ್ನು ಸಿಎಜಿ ಆಕ್ಷೇಪಿಸಿದೆ.
ನಿಯಮ ಉಲ್ಲಂಘಿಸಿ ಖನಿಜ ತೆಗೆದರು
ರಾಜ್ಯ ಖನಿಜಗಳ ನಿಗಮವು ಕೇಂದ್ರ ಸರಕಾರದ ಪೂರ್ವಾನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಖನಿಜ ಹೊರತೆಗೆದಿದ್ದರಿಂದ 15.21 ಕೋಟಿ ರೂ. ನಷ್ಟವಾಯಿತು ಎಂದು ವರದಿ ಉಲ್ಲೇಖಿಸಿದೆ.

the fil favicon

SUPPORT THE FILE

Latest News

Related Posts