ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು; ವೆಚ್ಚದಲ್ಲಿ ಏರಿಕೆ, 10 ವರ್ಷವಾದರೂ ಸಾಫಲ್ಯವಾಗದ ಯೋಜನೆಗಳು

ಬೆಂಗಳೂರು; ‘ಸದಾ ಬರಗಾಲದ ಅಪಾಯಗಳಿಗೆ ಗುರಿಯಾಗುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ, ರಾಮನಗರ ಸೇರಿದಂತೆ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗಳು,  10 ವರ್ಷಗಳಾದರೂ  ಉದ್ದೇಶವನ್ನು ಸಾಧಿಸಿಲ್ಲ. ಅಲ್ಲದೇ ಯೋಜನೆಯ ಪೂರ್ಣಗೊಳಿಸುವಿಕೆಯು ಕನಸಾಗಿಯೇ ಉಳಿದಿದೆ,’.

 

ಹೀಗೆಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ವರದಿಯಲ್ಲಿ ಅಭಿಪ್ರಾಯಿಸಿದ್ದಾರೆ.

 

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಬರ ನಿವಾರಣೆಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಪರಿಶೀಲನೆ ಮಾಡಿದೆ. ಈ ವರದಿ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ  ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣವನ್ನು ಅಧ್ಯಯನ ಮಾಡಿದೆ. ಯೋಜನೆ ನಿರ್ಮಾಣ ಆರಂಭವಾದ ದಿನದಿಂದ  10 ವರ್ಷಗಳವರೆಗೆ ಯೋಜನೆಗಳು ಸಾಗಿರುವ ಹಾದಿ, ಪ್ರಗತಿ ಕುರಿತು ತನ್ನ ಅವಲೋಕನಗಳನ್ನು ವರದಿಯಲ್ಲಿ ವಿಸ್ತೃತವಾಗಿ ವಿಶ್ಲೇಷಿಸಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣದಲ್ಲಿ ಸಿಎಜಿ ಅಧ್ಯಯನವೇನು?

 

ಚಿಕ್ಕಬಳ್ಳಾಪುರವು ಯಾವಾಗಲೂ ಬರಗಾಲದ ಅಪಾಯಗಳಿಗೆ ಗುರಿಯಾಗುವ ಜಿಲ್ಲೆಗಳಲ್ಲಿ ಒಂದಾಗಿದೆ. ಅಂರ್ತಜಲದ ಅತಿಯಾದ ಬಳಕೆ ಪರಿಣಾಮ, ಜಿಲ್ಲೆಯ ಎಲ್ಲಾ ತಾಲೂಕುಗಳೂ ಅಂತರ್ಜಲ ಸಂಕಷ್ಟಕ್ಕೆ ಒಳಗಾದವು ಎಂದು ಅಧಿಸೂಚನೆ ಹೊರಡಿಸಿತ್ತು. ಇದರಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಜಿಲ್ಲೆಯ ಅಗತ್ಯಗಳನ್ನು ಪೂರೈಸುವ ಮತ್ತು ಬರದಿಂದ ಉಂಟಾಗುವ ಪರಿಣಾಮವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದವು.

 

ಬರಪೀಡಿತ ಪೂರ್ವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕಾಘಿತ್ತು. ಇವುಗಳಿಗೆ ಮೀಸಲಾದ ನೀರು ಸರಬರಾಜು ಯೋಜನೆಗಳಲ್ಲಿ ಮತ್ತು ಹಾಸನ, ಚಿತ್ರದುರ್ಗ, ತುಮಖೂರು, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಇತರ ಅಗತ್ಯವಿರುವ  ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿತ್ತು.

 

 

ಪಶ್ಚಿಮಾಭಿಮುಖಿಯಾಗಿ ಹರಿಯುವ ತೊರೆಗಳಿಂದ 24.01 ಟಿಎಂಸಿ ನೀರನ್ನು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮತ್ತು ಈ ಜಿಲ್ಲೆಗಳಲ್ಲಿ ಜಲಮೂಲಗಳನ್ನು ತುಂಬಿಸಲು 2014ರಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಅನುಮೋದಿತ ಡಿಪಿಆರ್ (2012ರ ಜುಲೈ) ಪ್ರಕಾರ 8,323.50 ಕೋಟಿ ಗಳ ಮೂಲ ಯೋಜನಾ ವೆಚ್ಚವನ್ನು 12,912.36 ಕೋಟಿಗೆ (ಫೆ.2014) ಪರಿಷ್ಕರಿಸಲಾಯಿತು. ಮತ್ತು ನಂತರ 23,251.66 ಕೋಟಿಗಳಿಗೆ ಪರಿಷ್ಕರಿಸಲಾಯಿತು.

 

2023-24ರ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಯೋಜನೆಯು 2023ರ ಆಗಸ್ಟ್‌ ವೇಳೆಗೆ ಒಟ್ಟು 14,076 ಕೋಟಿ (ಶೇ.60ರಷ್ಟು ಆರ್ಥಿಕ ಪ್ರಗತಿ)  ವೆಚ್ಚವಾಗಿತ್ತು. ಆದರೂ ಈ ಯೋಜನೆಯು ಅಪೂರ್ಣವಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.

 

 

 

ಚಿಕ್ಕಬಳ್ಳಾಪುರ ಕುಡಿಯುವ ನೀರು ಮತ್ತು ಟ್ಯಾಂಕ್‌ ಭರ್ತಿಗೆ 5.093 ಟಿಎಂಸಿ ಹಾಗೂ ರಾಮನಗರದಲ್ಲಿ ಕುಡಿಯುವ ನೀರಿಗಾಗಿ 1.834 ಟಿಎಂಸಿ ಒದಗಿಸುವ ಉದ್ದೇಶವಿದೆ. ಆದರೆ ಈ ಯೋಜನೆಯು ಅನುಚಿತ ಯೋಜನೆಯಿಂದ ದೋಷಪೂರಿತವಾಗಿದೆ. ಭೂಮಿಯ ಅಲಭ್ಯತೆ ಮತ್ತು ಅನುಷ್ಠಾನದಲ್ಲಿನ ವಿಪರೀತ ವಿಳಂಬವಾಗಿತ್ತು. ಹೀಗಾಗಿ ಯೋಜನೆಯ ವಿನ್ಯಾಸ, ಜೋಡಣೆಯಲ್ಲಿ ಆಗಾಗ್ಗೆ ಬದಲಾವಣೆಗಳಾಗಿವೆ.

 

ಚಿಕ್ಕಬಳ್ಳಾಪುರದಲ್ಲಿ ಪೈಪ್ ಲೈನ್‌ ಕಾಮಗಾರಿಗೆ ಡಿಪಿಎಆರ್ 69.87 ಉದ್ದವಿತ್ತು. ಆದರೆ ಪೂರ್ಣಗೊಂಡಿಲ್ಲ. ರಾಮನಗರದಲ್ಲಿ ಡಿಪಿಆರ್ ಪ್ರಕಾರ 4 .50 ಉದ್ದ ಕಾಮಗಾರಿ ನಡೆಯಬೇಕಿತ್ತು. ಆದರೆ 0.50 ಮಾತ್ರ ಪೂರ್ಣಗೊಂಡಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ 131.33 ಎಕರೆ ಭೂ ಸ್ವಾಧೀನವಾಗಬೇಕಿತ್ತು.  ಆದರೆ ಶೂನ್ಯ ಎಂದು ತೋರಿಸಿದೆ. ರಾಮನಗರದಲ್ಲಿ 7.13 ಎಕರೆ ಭೂ ಸ್ವಾಧೀನವಾಗಬೇಕಿತ್ತು. ಆದರೆ ಇಲ್ಲಿಯೂ ಶೂನ್ಯ ಪ್ರಗತಿ ಎಂದು ತೋರಿಸಿದೆ.

 

‘ಹೀಗಾಗಿ ಯೋಜನೆ ನಿರ್ಮಾಣ ಪ್ರಾರಂಭವಾದ 10 ವರ್ಷಗಳ ನಂತರವೂ ಬರಪೀಡಿತ ಜಿಲ್ಲೆಗಳಿಗೆ ಮೀಸಲಾದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶವನ್ನು ಸಾಧಿಸಲಾಗಿಲ್ಲ. ಆದ್ದರಿಂದ ಸಾಧನೆಗೆ ಸಂಬಂಧಿಸಿದ ಕೆಲಸದ ಗುರಿಗಳನ್ನು ಪರಿಗಣಿಸಿದರೇ ಯೋಜನೆಯ ಪೂರ್ಣಗೊಳಿಸುವಿಕೆಯು ದೂರದ ಕನಸಾಗಿಯೇ ಉಳಿಯಿತು,’ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

ಅಂತರ್ಜಲದ ಕೃತಕ ಮರುಪೂರಣ

 

ಮಹಾರಾಷ್ಟ್ರದಲ್ಲಿ ಜಲಯುಕ್ತ ಶಿವಾರ್ ಯೋಜನೆ, ಗುಜರಾತ್‌ನಲ್ಲಿ  ಸುಜಲಾಂ ಸುಫಲಾಂ ಜಲಸಂಚಾಯ್ ಅಭಿಯಾನ, ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಜಲ ಸ್ವಾವಲಂಬನ್‌ ಅಭಿಯಾನ, ತೆಲಂಗಾಣದಲ್ಲಿಲ ಮಿಷನ್ ಕಾಕತಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಸುಸ್ಥಿರ ಜಲ ನಿರ್ವಹಣಾ ಅಭ್ಯಾಸಗಳ ಮೂಲಕ ಅಂತರ್ಜಲ ಮತ್ತು ಜಲ ಸಂರಕ್ಷಣೆಗೆ ಕೃತಕ ಮರುಪೂರಣ ಮಾಡುವ ಯೋಜನೆಗಳನ್ನು ಅನೇಕ ರಾಜ್ಯಗಳು ಜಾರಿಗೆ ತಂದಿವೆ.

 

 

ಆದರೆ ಕರ್ನಾಟಕ ದಲ್ಲಿ ಅಂತರ್ಜಲ ಮತ್ತು ನೀರಿನ ಸಂರಕ್ಷಣೆಗೆ ಕೃತಕ ಮರುಪೂರಣ ಕುರಿತು ಅಂತಹ ಯಾವುದೇ ನವೀನ ಯೋಜನೆಗಳನ್ನೇ ರೂಪಿಸಿಲ್ಲ ಎಂದು ಸಿಎಜಿ ವರದಿ ಹೇಳಿದೆ.

 

ಅಂತರ್ಜಲ ಹೊರತೆಗೆಯುವಿಕೆಯಲ್ಲಿ ಕಟ್ಟುನಿಟ್ಟಿಲ್ಲ

 

ಸಾಕಷ್ಟು ಮಳೆ ಕೊರತೆ ಅಥವಾ ಕಳಪೆ ಜಲಸಂರಕ್ಷಣಾ ಅಭ್ಯಾಸಗಳಿಂದಾಗಿ ಅತಿಯಾದ ಹೊರತೆಗೆಯುವಿಕೆ, ಕಳಪೆ ಮರು ಪೂರಣವು ಅಂತರ್ಜಲದ ಮೇಲೆ ಪರಿಣಾಮ ಬೀರಿದೆ. ಇದರಿಂದ ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳಲ್ಲಿ ನೀರಿನ ಲಭ್ಯತೆ  ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದು ಸಂಭವನೀಯ ಬರದ ಪರಿಸ್ಥಿತಿಗಳ ಮುಖ್ಯ ಸೂಚಕವಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

 

 

ರಾಜ್ಯವು ಪುನರಾವರ್ತಿತ ಬರಗಾಲದ ಅಪಾಯಕ್ಕೆ ಒಳಗಾಗಿದೆ. ಆದರೂ ಅಂತರ್ಜಲ ಅತಿಯಾದ ಹೊರತೆಗೆಯುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬ ಸಂಗತಿಯನ್ನು  ಲೆಕ್ಕ ಪರಿಶೋಧನೆಯು ಗಮನಿಸಿದೆ. ಖಾಸಗಿ ನೀರಿನ ಟ್ಯಾಂಕರ್‍‌ಗಳ ಮೂಲಕ ವಾಣಿಜ್ಯ ಉದ್ದೇಶಗಳಿಗಾಗಿ ಅಂತರ್ಜಲವನ್ನು ಕಾನೂನುಬಾಹಿರ ಮತ್ತು ಅತಿಯಾಗಿ ಹೊರತೆಗೆಯುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಕೊಳವೆ ಬಾವಿಗಳ ಸಂಖ್ಯೆಯ ಬಗ್ಗೆ ಸಮಯ, ಸರಣಿಯ ದತ್ತಾಂಶಗಳಾಗಲೀ ಅಥವಾ ನೀರಿನ ಸಂಕಷ್ಟದಿಂದ ಬಳಲುತ್ತಿರುವ ಅಧಿಸೂಚಿತ  ತಾಲೂಕುಗಳಲ್ಲಿ ಕೊರೆದ ಒಟ್ಟು ಕೊಳವೆ ಬಾವಿಗಳ ಸಂಖ್ಯೆಯ ದತ್ತಾಂಶವೂ ಇಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿದೆ.

 

ಎತ್ತರದ ಕಟ್ಟಡಗಳು ಮತ್ತು ಅದರಿಂದ ಅಂತರ್ಜಲ ಹೊರತೆಗೆಯುವಿಕೆ ದತ್ತಾಂಶವನ್ನು ನಿರ್ವಹಿಸಲಿಲ್ಲ. ಎರಡು ಕೊಳವೆ ಬಾವಿಗಳ ನಡುವೆ ಕನಿಷ್ಠ 500 ಮೀಟರ್‍‌ ಅಂತರವನ್ನು ನಿಗದಿಪಡಿಸುವ ನಿಯಮವನ್ನು ಪಾಲಿಸಲಿಲ್ಲ ಮತ್ತು ನಿಯಮಗಳನ್ನೂ ಜಾರಿಗೊಳಿಸಲಿಲ್ಲ. ಅಂತರ್ಜಲ ನಿಯಂತ್ರಣದಲ್ಲಿನ  ಸಡಿಲತೆಯ ಪರಿಣಾಮ, ಅಧಿಸೂಚಿತ ಅಂತರ್ಜಲ ಸಂಕಷ್ಟದಿಂದ ಬಳಲುತ್ತಿರುವ ತಾಲೂಕುಗಳ ಸಂಖ್ಯೆ ಹೆಚ್ಚಾಗಿದೆ.  2012ರಲ್ಲಿ 35ರಿಂದ 2020ರಲ್ಲಿ 45ಕ್ಕೆ ನಿರಂತರವಾಗಿ ಏರಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

 

ರಾಜ್ಯದಲ್ಲಿ 2012ರಲ್ಲಿ 35 ಅಧಿಸೂಚಿತ ತಾಲೂಕುಗಳಿದ್ದರೇ 2015ರಲ್ಲಿ ಈ ಸಂಖ್ಯೆ 30ಕ್ಕಿಳಿಯಿತು. 2017ರಲ್ಲಿ 43ಕ್ಕೇರಿತು. 2020ರಲ್ಲಿ 45ಕ್ಕೇರಿದೆ. ರಾಜ್ಯ ಸರ್ಕಾರವ ಅಥವಾ ಜಿಲ್ಲಾಡಳಿಗಳು ನೀರಿನ ಸಂರಕ್ಷಣೆ, ಕೊಯ್ಲು ಮತ್ತು ಅಂತರ್ಜಲ ಅತಿಯಾದ ಬಳಕೆಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನೇ ಕೈಗೊಂಡಿಲ್ಲ. ಬದಲಿಗೆ ರಾಜ್ಯ, ಜಿಲ್ಲಾಡಳಿತವು ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಆಶ್ರಯಿಸಿದರು. ಜೊತೆಗೆ ಬರಗಾಲದ ಸಮಯದಲ್ಲಿ ಟ್ಯಾಂಕರ್‍‌ಗಳ ಮೂಲಕ ಸರಬರಾಜು ಮಾಡಲು ಕೊಳವೆ ಬಾವಿ ಮಾಲೀಕರಿಂದ ನೀರನ್ನು ಪಡೆದರು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts