ಪಂಪ್ಡ್‌ ಸ್ಟೋರೇಜ್‌ ಘಟಕ ಯೋಜನೆ; ಸಾರ್ವಜನಿಕ ಹಿತದೃಷ್ಟಿಯಿಲ್ಲವೆಂಬ ನೆಪ, ಕಡತ ಬಹಿರಂಗಕ್ಕೆ ನಕಾರ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಖಾಸಗಿ ಸಹಭಾಗಿತ್ವದಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಘಟಕ ನಿರ್ಮಾಣ ಕಾಮಗಾರಿಯು  ಎಸ್ಕಾಂಗಳ ನಷ್ಟಕ್ಕೂ  ದಾರಿಮಾಡಿಕೊಡಲಿದೆ ಎಂದು ಅಭಿಪ್ರಾಯಿಸಿದ್ದ  ಆರ್ಥಿಕ ಇಲಾಖೆಯು ಇದೀಗ ಈ ಕಡತವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಈಗಿನ ಕಾಂಗ್ರೆಸ್‌ ಸರ್ಕಾರವು  ಎರಡನೇ ಬಾರಿಗೆ  ನಿರಾಕರಿಸಿದೆ.

 

ಮತ್ತೊಂದು ವಿಶೇಷವೆಂದರೇ ಈ ಕಡತದಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಸರ್ಕಾರದ ಅಧೀನ ಕಾರ್ಯದರ್ಶಿಗೆ ಇದೊಂದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಮನದಟ್ಟಾಗಿಲ್ಲ ಎಂದೂ ಲಿಖಿತವಾಗಿ ಉತ್ತರ ನೀಡಿದೆ.

 

ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲಿನ ಪರಿಸರವಾದಿಗಳು, ನಾಗರಿಕರು ಈ ಯೋಜನೆಗೆ ಆಕ್ರೋಶ ವ್ಯಕ್ತಪಡಿಸಿ ಸರಣಿ ಸಭೆ, ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಆದರೂ ಸರ್ಕಾರವು ಈ ಯೋಜನೆಯನ್ನು ಕೈಬಿಟ್ಟಿಲ್ಲ. ಈ ಬೆಳವಣಿಗೆಗಳ ನಡುವೆಯೇ ಇದೇ ಯೋಜನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯದ ಕಡತವನ್ನು ಬಹಿರಂಗಗೊಳಿಸಲು ನಿರಾಕರಿಸುತ್ತಿರುವುದು ಮುನ್ನೆಲೆಗೆ ಬಂದಿದೆ.

 

2000 ಮೆಗಾ ವ್ಯಾಟ್‌ನ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಕುರಿತು ಆರ್ಥಿಕ ಇಲಾಖೆಯು 2022ರ ಜುಲೈ 21ರಂದು ಅಭಿಪ್ರಾಯ ನೀಡಿತ್ತು. ಈ ಅಭಿಪ್ರಾಯ ನೀಡುವ ಸಲುವಾಗಿ ಇಲಾಖೆಯು ಕಡತವನ್ನು ತೆರೆದಿತ್ತು. ಈ ಕಡತದಲ್ಲಿನ ಮಾಹಿತಿಗಾಗಿ ‘ದಿ ಫೈಲ್‌’ ಎರಡನೇ ಬಾರಿಗೆ 2024ರ ಆಗಸ್ಟ್‌ 20ರಂದು ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಯಲ್ಲಿ ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ಕಡತ ಸಂಖ್ಯೆಯನ್ನು ನಮೂದಿಸಿತ್ತು. ಇದಕ್ಕೆ  2024ರ ಸೆ.11ರಂದು ಉತ್ತರಿಸಿರುವ ಆರ್ಥಿಕ ಇಲಾಖೆಯು ಬಹುಸಂಖ್ಯೆಯ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವೆಂದು ಮನದಟ್ಟಾಗಿಲ್ಲ ಎಂಬ ನೆಪವನ್ನು ಮುಂದಿರಿಸಿ ಆರ್‍‌ಟಿಐ ಅರ್ಜಿಯನ್ನು ತಿರಸ್ಕರಿಸಿದೆ. ಇಲಾಖೆಯು ನೀಡಿರುವ ಉತ್ತರವು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

ಉತ್ತರದಲ್ಲೇನಿದೆ?

 

ತಮ್ಮ ಅರ್ಜಿಯಲ್ಲಿ ಯಾವುದೇ ನಿರ್ದಿಷ್ಟ ಆದೇಶ, ಸುತ್ತೋಲೆ, ಅಧಿಸೂಚನೆ ಪ್ರತಿಯನ್ನು ಒದಗಿಸುವಂತೆ ಕೋರಿರುವುದಿಲ್ಲ. FD 491 EXP 1 2021 ಕಡತದಲ್ಲಿ, ಇಂಧನ ಇಲಾಖೆಯ ಮತ್ತು ಆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳಿರುತ್ತವೆ. ಈ ದಾಖಲೆಗಳು ಬೇರೆ ಪ್ರಾಧಿಕಾರಕ್ಕೆ ಸೇರಿದ ಮಾಹಿತಿ ದಾಖಲೆಗಳಾಗಿರುವುದರಿಂದ ಇದನ್ನು ಆಯಾ ಪ್ರಾಧಿಕಾರದಿಂದಲೇ ಪಡೆಯಬೇಕಾಗುತ್ತದೆ.

 

ಆದ್ದರಿಂದ ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮ 8(ಡಿ) ಮತ್ತು ಇ ಅನುಸಾರ ತಾವು ಕೋರಿರುವ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಮಾಹಿತಿ ಹಕ್ಕು ಅಧಿಕಾರಿಯಾದ ನನಗೆ ಮನದಟ್ಟಾಗದ ಕಾರಣ ತಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕವಿತ್‌ ಎಲ್‌ ಅವರು ಉತ್ತರ ಒದಗಿಸಿದ್ದಾರೆ.

 

‘ದಿ ಫೈಲ್‌’ 2024ರ ಆಗಸ್ಟ್‌ 20ರಂದು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಯಲ್ಲಿ ಇಲಾಖೆಯ ಕಡತ ಸಂಖ್ಯೆಯನ್ನು ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ನಮೂದಿಸಿದೆ. ಇದನ್ನು ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿಯು ನೀಡಿರುವ ಉತ್ತರದಲ್ಲಿಯೂ ದಾಖಲಿಸಿದೆ. ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ನಮೂದಿಸಿರುವ ಕಡತ ಸಂಖ್ಯೆಯಲ್ಲಿಯೇ ಇದಕ್ಕೆ ಸಂಬಂಧಿಸಿದ ಆದೇಶ, ಸುತ್ತೋಲೆ, ಅಧಿಸೂಚನೆ ಪ್ರತಿಯೂ ಇರಲಿದೆ. ಆದರೂ ತಮ್ಮ ಅರ್ಜಿಯಲ್ಲಿ ಯಾವುದೇ ನಿರ್ದಿಷ್ಟ ಆದೇಶ, ಸುತ್ತೋಲೆ, ಅಧಿಸೂಚನೆ ಪ್ರತಿ ಒದಗಿಸಿರುವಂತೆ ಕೋರಿರುವುದಿಲ್ಲ ಎಂಬ ಕುಂಟು ನೆಪ ಒಡ್ಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಅದೇ ರೀತಿ ಈ ಕಡತದಲ್ಲಿ ವಿವಿಧ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳಿದ್ದರೂ ಸಹ ಇದೊಂದು ಸಾರ್ವಜನಿಕ ಯೋಜನೆಯಾಗಿರುವ ಕಾರಣ ಮತ್ತು ಈ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವನೆಗಳೂ ಸಹ ಸಾರ್ವಜನಿಕವಾಗಿವೆ. ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಆದೇಶವನ್ನೂ ಹೊರಡಿಸಿರುವ ಕಾರಣ ಈ ಕಡತದಲ್ಲಿರುವ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾಗಿರಿಸಬೇಕು. ಆದರೂ ಇಲಾಖೆಯು ಈ ಕಡತವನ್ನು ಮಾಹಿತಿ ಹಕ್ಕಿನ ಅಡಿಯಲ್ಲಿಯೂ ಒದಗಿಸದೇ ಮುಚ್ಚಿಡುತ್ತಿರುವುದರ ಹಿಂದೆ ಹಲವು ಅನುಮಾನಗಳಿವೆ.

 

ಹಾಗೆಯೇ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ಸ್ಥಳೀಯರು ಮತ್ತು ಪರಿಸರ ವಾದಿಗಳು ವಿರೋಧಿಸಿದ್ದಾರೆ. ಇದೊಂದು ಪರಿಸರ ಮಾರಕ ಯೋಜನೆ ಎಂದೂ ಪ್ರತಿಪಾದಿಸಿದ್ದಾರೆ. ಅದಕ್ಕೆ ವೈಜ್ಞಾನಿಕ ಮತ್ತು ಪರಿಸರಾತ್ಮಕ ಪುರಾವೆಗಳನ್ನೂ ಒದಗಿಸಿದ್ದಾರೆ. ಹೀಗಿದ್ದರೂ ಸಹ ಆರ್ಥಿಕ ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿಗೆ ಈ ಕಡತದಲ್ಲಿನ ಮಾಹಿತಿಯು ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಮನದಟ್ಟಾಗಿಲ್ಲ ಎಂದು ಉತ್ತರದಲ್ಲಿ ಉಲ್ಲೇಖಿಸಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

 

‘ಈ ಕಡತವನ್ನು ಬಹಿರಂಗಗೊಳಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಮೌಖಿಕ ನಿರ್ದೇಶನವಿದೆ. ಹೀಗಾಗಿ ಕಡತವನ್ನು ಆರ್‍‌ಟಿಐ ಅಡಿಯಲ್ಲಿಯೂ ಒದಗಿಸಲು ಕಷ್ಟಸಾಧ್ಯ,’ ಎನ್ನುತ್ತಾರೆ  ಹೇಳಲಿಚ್ಛಿಸದ ಅಧಿಕಾರಿಯೊಬ್ಬರು

 

ಆರ್ಥಿಕ ಇಲಾಖೆ ತಕರಾರೇನಿತ್ತು?

 

ಇಂಧನ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ (FD 491 Exp-1/2021, EN 27 PPT 2021-DATE-21-07-2022)ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ‘ಕೆಪಿಸಿಎಲ್‌ ಈಗಾಗಲೇ 2000 ಮೆಗಾವ್ಯಾಟ್‌ ಸಾಮರ್ಥ್ಯದ ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯಾಗಿದ್ದರೂ ತಕ್ಷಣವೇ 1000 ಮೆಗಾ ವ್ಯಾಟ್‌ ಸಾಮರ್ಥ್ಯದ ಮತ್ತೊಂದು ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಯೋಜನೆಯನ್ನು ಖಾಸಗಿ ಸಹಭಾಗಿತ್ವದಡಿಯಲ್ಲಿ ಕೈಗೆತ್ತಿಕೊಳ್ಳುವುದು ಅಗತ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು 2022ರ ಜುಲೈ 21ರಂದೇ ಅಭಿಪ್ರಾಯಿಸಿತ್ತು.

 

ಖಾಸಗಿ ವಲಯವು 5000 ಕೋಟಿ ರು. ವೆಚ್ಚದಲ್ಲಿ ಪಂಪ್ಡ್ ಸ್ಟೋರೇಜ್‌ ಘಟಕವನ್ನು ಸ್ಥಾಪಿಸುತ್ತಿದ್ದರೂ ರಾಜ್ಯ ಸರ್ಕಾರವು ಸಂಬಂಧಪಟ್ಟ ಖಾಸಗಿ ಪಾಲುದಾರರೊಂದಿಗೆ 25 ವರ್ಷಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿರಬೇಕಾಗುತ್ತದೆ. ಖಾಸಗಿ ಪಾಲುದಾರರು ಮಾಡಿದ ಹೂಡಿಕೆಯ ಸುಮಾರು 50 ಪ್ರತಿಶತವನ್ನು ಕರ್ನಾಟಕ ಸರ್ಕಾರ/ ಎಸ್ಕಾಂಗಳು ಮೊದಲ ವರ್ಷದಲ್ಲಿಯೇ ಪಾವತಿಸಬೇಕಾಗುತ್ತದೆ ಎಂದೂ ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿತ್ತು.

 

ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯದ ಪ್ರತಿ

 

ವಿಶೇಷವಾಗಿ ಈ ಘಟಕದ ಮೂಲಕ ಸೌರ ಮತ್ತು ಗಾಳಿ ವಿದ್ಯುತ್‌ನ್ನು ಗರಿಷ್ಟ ಸಮಯವಲ್ಲದವರೆಗೆ ಸಂಗ್ರಹಿಸುವುದು ಮತ್ತು ಈ ಸಂಗ್ರಹವಾಗಿರುವ ವಿದ್ಯುತ್‌ನ್ನು ಗರಿಷ್ಠ ಅವಧಿಯಲ್ಲಿ ಬಳಸುವ ಮೂಲ ಉದ್ದೇಶ ಹೊಂದಿದೆ. ಆದರೂ ಕರ್ನಾಟಕದಲ್ಲಿ 2021ರಲ್ಲೇ 14,367 ಮೆಗಾ ವ್ಯಾಟ್‌ ಸಾಮರ್ಥ್ಯದ ಗರಿಷ್ಠ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಅಲ್ಲದೆ ಪಿಆರ್‌ಡಿಸಿಎಲ್‌ನ ಅಧ್ಯಯನದ ಪ್ರಕಾರ 2024ರವರೆಗೂ ಗರಿಷ್ಠ ಬೇಡಿಕೆಯನ್ನು ಪೂರೈಸಲಿದೆ ಎಂದು ಅಭಿಪ್ರಾಯದಲ್ಲಿ ಆರ್ಥಿಕ ಇಲಾಖೆಯು ವಿವರಿಸಿತ್ತು.

 

ವಿದ್ಯುತ್ ಶೇಖರಣಾ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಮತ್ತು ಇಂಧನ ವಲಯದಲ್ಲಿ ದಕ್ಷತೆ ಜೊತೆಗೆ ಕೈಗಾರಿಕೆಗಳು ಮುಕ್ತ ಮಾರುಕಟ್ಟೆಯಿಂದ ನೇರವಾಗಿ ವಿದ್ಯುತ್ ಪಡೆಯುವ ಪ್ರವೃತ್ತಿಯನ್ನು ರೂಢಿಸಿಕೊಂಡಿವೆ. ಹೀಗಾಗಿ ಎಸ್ಕಾಂಗಳು ಸರಬರಾಜು ಮಾಡುವ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೂ ಖಾಸಗಿ ಸಹಭಾಗಿತ್ವದಲ್ಲಿ ಮತ್ತೊಂದು ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಕೈಗೆತ್ತಿಕೊಂಡರೆ ಎಸ್ಕಾಂಗಳ ನಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೂ ಆರ್ಥಿಕ ಇಲಾಖೆಯು ಹೇಳಿತ್ತು.

 

5,000 ಕೋಟಿ ವೆಚ್ಚದ  ಪಂಪ್ಡ್‌ ಸ್ಟೋರೇಜ್‌ ಘಟಕ; ವರ್ಷವಾದರೂ ಕಡತ ಬಹಿರಂಗಗೊಳಿಸದ ಸರ್ಕಾರ

ಉದ್ದೇಶಿತ ಯೋಜನೆ ಅನುಷ್ಠಾನದ ಬಗ್ಗೆ ಆರ್ಥಿಕ ಇಲಾಖೆಯು ನೀಡಿದ್ದ ಒಟ್ಟಾರೆ ಅಭಿಪ್ರಾಯದ ಕುರಿತು ಇಂಧನ ಇಲಾಖೆಯು ನೀಡಿರುವ ಸ್ಪಷ್ಟನೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ, ಪ್ರಸ್ತಾಪಿಸಿಯೂ ಇಲ್ಲ.

 

ಕರ್ನಾಟಕ ವಿದ್ಯುತ್‌ ನಿಗಮವು 2000 ಮೆಗಾ ವ್ಯಾಟ್‌ ಸಾಮರ್ಥ್ಯದ ಪಂಪ್ಡ್‌ ಸ್ಟೋರೇಜ್‌ ಘಟಕವನ್ನು ಸ್ಥಾಪಿಸಲು ಯೋಜನೆಯ ಡಿಪಿಆರ್ ಅನ್ನು ಈಗಾಗಲೇ M/s.WAPCOS ಮೂಲಕ ತಯಾರಿಸಿದೆ. ಅಂದಾಜು ವೆಚ್ಚ ಸುಮಾರು ರೂ.7,500 ಕೋಟಿಯಷ್ಟು ಹೂಡಿಕೆ ಮಾಡಬೇಕಿದೆ ಎಂದು ಸ್ಪಷ್ಟನೆಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts