ಅಸ್ಸಾಂ ಮಾದರಿ ಒಪ್ಪದ ಸರ್ಕಾರ; ಎನ್ಎಚ್‌ಎಂ ಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರಾಕರಣೆ

photo credit; zeenews

ಬೆಂಗಳೂರು; ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡುವ ಸಂಬಂಧ ಅಸ್ಸಾಂ ಮಾದರಿಯನ್ನು ಅಳವಡಿಸಿಕೊಳ್ಳಲು ನಿರಾಕರಿಸಿದೆ.

 

ಪ್ರತಿಯೊಂದು ಯೋಜನೆಗೂ ಗುಜರಾತ್‌ ಮಾದರಿಯನ್ನು ಪ್ರತಿಬಾರಿಯೂ ಉಲ್ಲೇಖಿಸಿ ಪ್ರಚಾರ ಪಡೆದುಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರವು ಗುಜರಾತ್‌ ಮಾದರಿಗಾಗಿ ಆರ್ಥಿಕ ಹೊರೆಯನ್ನೂ ಮೈಮೇಲೆ ಎಳೆದುಕೊಳ್ಳಲು ಹೊರಟಿದೆ. ಆದರೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಇಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡುವ ಮೂಲಕ ನೆಮ್ಮದಿ ನೀಡುವಂತಹ ಅಸ್ಸಾಂ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿಲ್ಲ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಅಸ್ಸಾಂ ರಾಜ್ಯದಲ್ಲಿ ನೀಡಲಾಗಿರುವ ಶಿಶುಪಾಲನಾ ರಜೆ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ನೌಕರರ ಸಂಘವು ಇಟ್ಟಿದ್ದ ಬೇಡಿಕೆಯನ್ನು ಸಚಿವ ಸುಧಾಕರ್‌ ಅಧ್ಯಕ್ಷತೆಯ ಸಭೆಯು ಇದನ್ನು ಒಪ್ಪದೇ ಪ್ರಸ್ತಾವನೆಯನ್ನು ತಳ್ಳಿ ಹಾಕಿದೆ.

 

 

ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಬೇಡಿಕೆಗಳ ಕುರಿತು 2022ರ ಫೆ.24ರಂದು ನಡೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಭೆಯ ನಡವಳಿ ಪ್ರತಿ

 

‘2021ರ ಸೆ.3ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಗುತ್ತಿಗೆ ನೌಕರರಾಗಿದ್ದು ಹಾಗೂ ಗುತ್ತಿಗೆ ಅವಧಿಯು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರು ಹಿನ್ನೆಲೆಯಲ್ಲಿ ಶಿಶುಪಾಲನಾ ರಜೆಯನ್ನು ಅಳವಡಿಸಿಕೊಳ್ಳಲು ಅವಕಾಶವಿರುವುದಿಲ್ಲ,’ ಎಂದು ಸಭೆಯಲ್ಲಿ ನಿರ್ಣಯ ಗೊಂಡಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

ಹೆರಿಗೆ ರಜೆ ನೀಡುವಾಗ ಗುತ್ತಿಗೆ ಆಧಾರದಲ್ಲಿ ದುಡಿಯುವವರು ಹಾಗೂ ಕಾಯಂ ನೌಕರರು ಎಂಬ ತಾರತಮ್ಯ ತೋರುವಂತಿಲ್ಲ. ಕಾಯಂ ನೌಕರರಿಗೆ ನೀಡುವಷ್ಟೇ ಹೆರಿಗೆ ರಜೆಯನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರಿಗೂ ನೀಡಬೇಕು’ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗಷ್ಟೇ ಆದೇಶಿಸಿತ್ತು.

 

‘ಆರ್ಥಿಕವಾಗಿ ಸಬಲರಾಗಲು ಮತ್ತು ಸಶಕ್ತ ಜೀವನ ರೂಪಿಸಿಕೊಳ್ಳಲು ಇಂದು ಮಹಿಳೆಯರೂ ವಿವಿಧ ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರಿಗೆಲ್ಲಾ ಹೆರಿಗೆ ರಜೆ ನಿರಾಕರಿಸಿದರೆ ಅದು ಸಾಮಾಜಿಕ ನ್ಯಾಯಕ್ಕೆ ಎಸಗುವ ಅಪಚಾರವಾಗುತ್ತದೆ’ ಎಂದು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

 

ಈ ಆದೇಶವನ್ನು 2013ರಲ್ಲಿ ಪ್ರಶ್ನಿಸಲಾಗಿತ್ತು. ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಪೀಠ, ‘ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಬಹಳಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಇವರಲ್ಲಿ, ದಿನಗೂಲಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೇ ಹೆಚ್ಚಿದ್ದಾರೆ. ಇಂಥವರ ಸಾಂವಿಧಾನಿಕ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿತ್ತು.

 

ಇದೇ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ದಿನ ಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು 2008-09ರಿಂದಲೂ ಪರಿಷ್ಕರಣೆಗೊಂಡಿಲ್ಲ. ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಂಘವು ಇರಿಸಿದ್ದ ಬೇಡಿಕೆಯನ್ನೂ ತಳ್ಳಿ ಹಾಕಿರುವ ಸರ್ಕಾರವು ‘ದಿನಭತ್ಯೆ ಹಾಗೂ ಪ್ರಯಾಣಭತ್ಯೆಯು ಪಿಐಪಿಯ ಮಿತಿ ಮೀರು ಹಿನ್ನೆಲೆಯಲ್ಲಿ ಸದರಿ ವರ್ಷದಲ್ಲಿ ಸೌಲಭ್ಯವನ್ನು ನೀಡಲು ಅವಕಾಶವಿರುವುದಿಲ್ಲ,’ ಎಂಬ ನಿರ್ಣಯ ಕೈಗೊಂಡಿದೆ.

 

ಹಾಗೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಯಾರು ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್, ಇತ್ಯಾದಿ ಧರಿಸಿ ಆರೈಕೆ ಮಾಡಿರುವವರಿಗೆ ಮಾತ್ರ ಕೋವಿಡ್‌ ಪ್ರೋತ್ಸಾಹ ಧನ ನೀಡಲಾಗಿದೆ. ಆದರೆ ಪಿಪಿಇ ಕಿಟ್‌ ಧರಿಸದೇ ಆರೈಕೆ ಮಾಡಿರುವವರಿಗೆ ಪ್ರೋತ್ಸಾಹ ಧನನೀಡಲು ಅವಕಾಶವಿಲ್ಲ ಎಂದು ಸಂಘದ ಈ ಬೇಡಿಕೆಯನ್ನೂ ತಳ್ಳಿ ಹಾಕಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

ಸಮಾನ ವೇತನಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಚಾರಿ ಅವರು ನೀಡಿದ್ದ ವರದಿಯಂತೆ 2021-22ನೇ ಸಾಲಿಗೆ ಪಡೆಯುತ್ತಿರುವ ವೇತನಕ್ಕೆ ಶೇ.15ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆ ಆಧರಿಸಿ 38 ವೃಂದಗಳ 17,033 ಸಿಬ್ಬಂದಿಗಳಿಗೆ 71.26 ಕೋಟಿ ರು. ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

the fil favicon

SUPPORT THE FILE

Latest News

Related Posts