ಬೆಂಗಳೂರು; ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಮುಂದುವರೆಸುವ ಸಂಬಂಧ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಕ್ಕಸಕ್ಕೆ ಹೊರೆ ಎಂದು ಪ್ರಸ್ತಾವನೆಯನ್ನೇ ಒಪ್ಪದಿದ್ದ ಆರ್ಥಿಕ ಇಲಾಖೆಯ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಆರ್ಥಿಕ ಕ್ಲಿಷ್ಟತೆ ಕಾರಣವನ್ನು ಮುಂದೊಡ್ಡಿರುವುದು ಆರ್ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಮತ್ತೊಂದು ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಬಂಧ ನೀತಿ ರೂಪಿಸಬೇಕು, ಇಲ್ಲದಿದ್ದರೆ ಹಾಸ್ಟೆಲ್ಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಶಿಫಾರಸ್ಸು ಮಾಡಿದ್ದ ಸಮಾಜ ಕಲ್ಯಾಣ ಇಲಾಖೆಯು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ರಾಗ ಬದಲಾಯಿಸಿತ್ತು.
ವಸತಿ ಶಾಲೆಗಳಲ್ಲಿ ಶೇ. 10ರಷ್ಟು ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ರು ಹೆಚ್ಚುವರಿ ಅನುದಾನ ಒದಗಿಸಲು ಆರ್ಥಿಕ ಇಲಾಖೆಯು ಆರ್ಥಿಕ ಕ್ಲಿಷ್ಟತೆ ಕಾರಣವನ್ನು ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮುಂದೊಡ್ಡಿತ್ತು.
ಇದೀಗ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಮುಂದುವರೆಸಲೂ ಸಹ ಆರ್ಥಿಕ ಕ್ಲಿಷ್ಟತೆಯನ್ನು ಮುಂದೊಡ್ಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ‘ದಿ ಫೈಲ್’, ಆರ್ಟಿಐ ಅಡಿಯಲ್ಲಿ 260 ಪುಟಗಳ ಕಡತವನ್ನು ಪಡೆದುಕೊಂಡಿದೆ.
ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಮುಂದುವರಿಕೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ನೀತಿಯನ್ನೂ ರೂಪಿಸಿರಲಿಲ್ಲ. ಹೀಗಾಗಿ ಹಿಂದಿನ ವರ್ಷದಿಂದ ಚಾಲ್ತಿಯಲ್ಲಿದ್ದ ಕಡತವನ್ನು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಆರಂಭದಲ್ಲೇ ಕಡತವು ಆರ್ಥಿಕ ಇಲಾಖೆಗೆ ಪುನರ್ ಮಂಡನೆಯಾಗಿತ್ತು.
ಆರ್ಥಿಕ ಕ್ಲಿಷ್ಟತೆ ಎಂದಿದ್ದ ಆರ್ಥಿಕ ಇಲಾಖೆ
ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಮುಂದುವರೆಸಲು 23.5 ಕೋಟಿ ವೆಚ್ಚವನ್ನು ಒಳಗೊಂಡಿರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು 2023ರ ಜೂನ್ ತಿಂಗಳ ವಿವಿಧ ದಿನಾಂಕಗಳಂದು ಚರ್ಚಿಸಿತ್ತು.
‘ಈ ಪ್ರಸ್ತಾವನೆಗೆ ಹೆಚ್ಚುವರಿ ಅನುದಾನ ಎಂದರೇ 23.50 ಕೋಟಿ ವೆಚ್ಚ ಬರುತ್ತಿದೆ. ಇದು ಕೇಂದ್ರ ಪುರಸ್ಕೃತ ಯೋಜನೆ. ಮ್ಯಾನೇಜ್ಮೆಂಟ್ ಕೋಟಾ ಅಡಿ ಆಯ್ಕೆಯಾದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ ಎಂದು ಕೆಂದ್ರ ಸರ್ಕಾರವು ತಿಳಿಸಿದೆ. ಹೀಗಾಗಿ ಈ ಪ್ರಸ್ತಾವನೆ ಒಪ್ಪಿದಲ್ಲಿ ರಾಜ್ಯ ಸರ್ಕಾರವೇ ಶೇ. 100ರಷ್ಟು ವಿದ್ಯಾರ್ಥಿ ವೇತನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈಗಿರುವ ಆರ್ಥಿಕ ಕ್ಲಿಷ್ಟತೆ ಪರಿಸ್ಥಿತಿಯಲ್ಲಿ ಇದು ರಾಜ್ಯದ ಬೊಕ್ಕಸಕ್ಕೆ ಅಧಿಕ ಹೊರೆಯಾಗಲಿದೆ. ಹೀಗಾಗಿ ಪ್ರಸ್ತಾವನೆಯನ್ನು ಕೈ ಬಿಡುವಂತೆ ಆಡಳಿತ ಇಲಾಖೆಗೆ ತಿಳಿಸಬಹುದು,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು 2023ರ ಜೂನ್ 15ರಂದು ಟಿಪ್ಪಣಿ ಹಾಳೆಯಲ್ಲಿ ತಿಳಿಸಿದ್ದರು.
ಅದೇ ರೀತಿ ಇದೇ ವಿಚಾರವನ್ನು ಈಶ್ವರ್ ಖಂಡ್ರೆ ಅವರೂ ಸಹ 2022ರಲ್ಲಿಯೂ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದರು. 2021-22ನೇ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸ್ಥಗಿತಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರುಗಳ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೂ ಉನ್ನತ ವ್ಯಾಸಂಗ ಮಾಡಲು ಶುಲ್ಕ ವಿನಾಯಿತಿ ಮುಂದುವರೆಸಬೇಕು ಎಂದು ಕೋರಿದ್ದರು.
ಈ ಕುರಿತಾದ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಅಂದಿನ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸದನಕ್ಕೆ ಭರವಸೆ ನೀಡಿದ್ದರು.
ಈ ಸಂಬಂಧ 2023ರ ಸೆ.25ರಂದು ಆರ್ಥಿಕ ಇಲಾಖೆಯ ಅಧಿಕಾರಿಗಳೊಡನೆ ಚರ್ಚೆ ಮುಂದುವರೆದಿತ್ತು. ಭಾರತ ಸರ್ಕಾರವು ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವುದರಿಂದ ವಿದ್ಯಾರ್ಥಿ ವೇತನ ಪಾವತಿಸಲು ಸಾಧ್ಯವಿಲ್ಲ. ಹಾಗೂ ಪ್ರವೇಶ ಪರೀಕ್ಷೆ, ಕೌನ್ಸಲಿಂಗ್ ಮೂಲಕ ಖಾಸಗಿ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಸೀಟುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ನೀಡಿ ನಿರ್ವಹಣಾ ವೆಚ್ಚವನ್ನು ಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಆದೇಶ ಕೋರಿ ಕಡತ ಮಂಡಿಸಿದ್ದರು.
ರಾಗ ಬದಲಿಸಿದ್ದ ಸಮಾಜ ಕಲ್ಯಾಣ ಇಲಾಖೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಪ್ರಸ್ತಾವನೆಯನ್ನು ಮಂಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯು ಈ ಸಂಬಂಧ ನೀತಿ ರೂಪಿಸಬೇಕು. ಇಲ್ಲದಿದ್ದಲ್ಲಿ ಹಾಸ್ಟೆಲ್ಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯು ರಾಗ ಬದಲಿಸಿತ್ತು.
ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕುರಿತು ಸಚಿವರೊಂದಿಗೆ ಚರ್ಚಿಸಲಾಗಿದೆ. ಕಡತವನ್ನು ಆರ್ಥಿಕ ಇಲಾಖೆಗೆ ಕಳಿಸಿ ಎಂದು ಸಚಿವರು ಸೂಚಿಸಿದ್ದಾರೆ. ಅದರಂತೆ ಕಡತವನ್ನು ಮರು ಸಲ್ಲಿಸಲಾಗುತ್ತಿದೆ. ಪ್ರಸ್ತಾವನೆಯನ್ನು ಪೂರ್ಣವಾಗಿ ಅಲ್ಲದಿದ್ದರೂ ಭಾಗಶಃವಾದರೂ ಒಪ್ಪಬೇಕು ಎಂದು ಕೋರಿದ್ದ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಮರು ಪರಿಶೀಲನೆಯಲ್ಲೂ ಒಪ್ಪದ ಆರ್ಥಿಕ ಇಲಾಖೆ
ಖಾಸಗಿ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕುರಿತು ಪ್ರಸ್ತಾಪಿಸಿತ್ತು. ಆರ್ಥಿಕ ಇಲಾಖೆಯಿಂದ ಈ ಕುರಿತು ಶಿಫಾರಸ್ಸು ಕೂಡ ಮಾಡಲಾಗಿತ್ತು. ಆದರೆ ವಿದ್ಯಾರ್ಥಿವೇತನ ವಿಸ್ತರಿಸಿದ ನಂತರ ಆ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶವನ್ನು ಸಹ ಪಡೆಯಬಹುದು ಮತ್ತು ಈ ಯೋಜನೆಗಳಿಗೆ ಸುಮಾರು 13 ಕೋಟಿ ರೂ.ಗಳು ಬೇಕಾಗುತ್ತವೆ ಎಂದು ಆರ್ಥಿಕ ಇಲಾಖೆಯು ಪುನರುಚ್ಛರಿಸಿತ್ತು.
ಪ್ರಸ್ತಾವ ಕೈ ಬಿಡಲು ಸೂಚನೆ
ಅಲ್ಲದೇ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದ ಮತ್ತು ಆರ್ಥಿಕವಾಗಿ ದುರ್ಬಲತೆ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳನ್ನು ಒಳಗೊಂಡ ವಿದ್ಯಾರ್ಥಿಗಳ ಪುನರಾವರ್ತಿತ ಮತ್ತು ಮರುಕಳಿಸಲಾಗದ ವೆಚ್ಚಗಳನ್ನು ಹೆಚ್ಚಿಸಲು ಹಲವು ಪ್ರಸ್ತಾಪಗಳು ಬಾಕಿ ಇದೆ. ಹೀಗಾಗಿ ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಪರಿಗಣಿಸಿದಲ್ಲಿ ಮ್ಯಾನೇಜ್ಮೆಂಟ್ ಕೋಟಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಭರವಸೆಯನ್ನು ಪ್ರಸ್ತಾವವನ್ನು ಕೈ ಬಿಡಬಹುದು ಎಂದು ಹಣಕಾಸು ಇಲಾಖೆ ಸೂಚಿಸಬಹುದು ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ ಟಿ ರೇಜು ಅವರು ಟಿಪ್ಪಣಿ ಹಾಳೆಯಲ್ಲಿ ನಿರ್ದೇಶಿಸಿದ್ದರು.
ಭರವಸೆಯಷ್ಟೇ, ಬದ್ಧತೆಯಿಂದ ಕೂಡಿಲ್ಲ
ಹಾಗೆಯೇ ಈ ವಿಷಯವು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಹೋಲುತ್ತದೆ. ಈ ಪ್ರಕರಣವನ್ನು ಪರಿಶೀಲಿಸುವ ಬಗ್ಗೆ ವಿಧಾನಸಭೆಯಲ್ಲಿ ಭರವಸೆಯನ್ನು ನೀಡಲಾಗಿದೆಯೇ ಹೊರತು ಇದು ಯಾವುದೇ ಬದ್ಧತೆಗಳಿಂದ ಕೂಡಿಲ್ಲ. ಅಗತ್ಯವಿದ್ದರೇ ಮುಖ್ಯಮಂತ್ರಿಗಳಿಗೆ ಕಡತವನ್ನು ಮಂಡಿಸಬಹುದು ಎಂದು ಎಂ ಟಿ ರೇಜು ಅವರು ಹೇಳಿರುವುದು ಗೊತ್ತಾಗಿದೆ.
ಈ ಅಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್ ಅವರೂ ಸಹ ಒಪ್ಪಿದ್ದರು.
ಅದರಂತೆ 2023ರ ಅಕ್ಟೋಬರ್ 26ರಂದು ಆರ್ಥಿಕ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಗೆ ತನ್ನ ಅಭಿಪ್ರಾಯವನ್ನು ತಿಳಿಸಿತ್ತು.
‘ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಪ್ರಸ್ತಾವವನ್ನು ಕೈ ಬಿಡಲಾಗಿದೆ,’ ಎಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಿದ್ದರು.