ಕೆಎಎಸ್‌ ಅಕ್ರಮ; ಸುಗ್ರೀವಾಜ್ಞೆಗೆ ಸಮರ್ಥನೆ, ಉತ್ತರ ಪತ್ರಿಕೆಗಳ ಪ್ರಕರಣಕ್ಕೆ ಆಯೋಗ ಹೊಣೆ

ಬೆಂಗಳೂರು; ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿದ್ದ ಮೈತ್ರಿ ಸರ್ಕಾರವು ಹೊರಡಿಸಿದ್ದ ಕರ್ನಾಟಕ ಸಿವಿಲ್‌ ಸೇವೆಗಳ (ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ ರಕ್ಷಣೆ) ಅಧ್ಯಾದೇಶ 2019ರ ವಿಧೇಯಕವನ್ನು ಬಿಜೆಪಿ ಸರ್ಕಾರವೂ ಸಮರ್ಥಿಸಿಕೊಂಡಿದೆ. ಅಲ್ಲದೆ 91 ಉತ್ತರ ಪತ್ರಿಕೆಗಳ ಪ್ರಕರಣದಲ್ಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವೇ ಹೊಣೆ ಎಂದು ಗಂಭೀರವಾಗಿ ಆರೋಪಿಸಿ ಇಡೀ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದೆ.

ಅದೇ ರೀತಿ 1998, 99 ಮತ್ತು 2004ನೇ ಬ್ಯಾಚ್‌ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌ ಕುಮಾರ್‌ ಅವರ ನೇತೃತ್ವದ ಪೀಠವು ನೀಡಿದ್ದ ಮೊದಲನೇ ನಿರ್ದೇಶನವನ್ನು ಪಾಲಿಸಿದಲ್ಲಿ ಕಳೆದ 15 ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರವು ಅಕ್ರಮ ಫಲಾನುಭವಿಗಳು ಎಂಬ ಆರೋಪಕ್ಕೆ ಒಳಗಾಗಿರುವ ಅಭ್ಯರ್ಥಿಗಳ ರಕ್ಷಣೆಗೆ ಧಾವಿಸಿದೆ.

ಸುಗ್ರೀವಾಜ್ಞೆ ಜಾರಿಯನ್ನು ಪ್ರಶ್ನಿಸಿ ಕೆ ಆರ್‌ ಖಲೀಲ್‌ ಅಹ್ಮದ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರವು ಮಸೂದೆಯನ್ನು ಸಮರ್ಥಿಸಿಕೊಂಡಿದೆ. ಸರ್ಕಾರವು ಸಲ್ಲಿಸಿರುವ ಆಕ್ಷೇಪಣೆಯ ಪ್ರಮಾಣಪತ್ರದ ಪ್ರತಿಯು ‘ದಿ ಫೈಲ್‌’ ಲಭ್ಯವಾಗಿದೆ.

2016ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌ ಕುಮಾರ್‌ ಅವರ ನೇತೃತ್ವದ ಪೀಠವು ನಿರ್ದೇಶನ 1ರಲ್ಲಿ ನೀಡಿದ್ದ 5 ಅಂಶಗಳ ಪಾಲನೆಗೆ ಸಂಬಂಧಿಸಿದಂತೆಯೂ ಸರ್ಕಾರವು ಆಕ್ಷೇಪಣೆ ಸಲ್ಲಿಸಿದೆ.

‘1998,99 ಮತ್ತು 2004ನೇ ಬ್ಯಾಚ್‌ನ ಅಧಿಕಾರಿಗಳು ಕಳೆದ 15 ವರ್ಷಗಳಿಂದ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮೊದಲ ನಿರ್ದೇಶನವನ್ನು ಪಾಲಿಸಿದಲ್ಲಿ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ತತ್ಪರಿಣಾಮವಾಗಿ ಈ ಅಧಿಕಾರಿಗಳಿಗೆ ಅಪಾರ ನಷ್ಟವಾಗುತ್ತದೆ. ಹಾಗೂ ಹಿಂದುಳಿದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ. ಮತ್ತು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದೇವೆ,’ ಎಂದು ಸಮರ್ಥಿಸಿಕೊಂಡಿದೆ.

ಹಾಗೆಯೇ ಮಸೂದೆಯನ್ನು ಸಂವಿಧಾನದ ವಿಧಿ 246ರ 7ನೇ ಅಧ್ಯಾಯದಂತೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆಯಾದರೂ ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ 246ರ ವಿಧಿ ಅನ್ವಯವಾಗುವುದಿಲ್ಲ. ಸಾಮಾನ್ಯ ಸಂದರ್ಭಗಳಲ್ಲಿ 246ರ ವಿಧಿ ಪ್ರಕಾರ ರಾಜ್ಯ ಸರ್ಕಾರವು ಮಸೂದೆ ತರಬಹುದು. ಆದರೆ ಅಕ್ರಮ ನೇಮಕಾತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ನಿರ್ದೇಶನಗಳನ್ನು ಪಾಲಿಸುವ ಸಂದರ್ಭದಲ್ಲಿ ಸಂವಿಧಾನದ 246ರ ವಿಧಿ ಅನ್ವಯವಾಗುವುದಿಲ್ಲ ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ಅನ್ವಯಿಸಿಕೊಳ್ಳಬಾರದು ಎಂದು ಅರ್ಜಿದಾರರೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಕೆಪಿಎಸ್‌ಸಿ ಹೊಣೆ ಎಂದ ಸರ್ಕಾರ

91 ಉತ್ತರ ಪತ್ರಿಕೆಗಳಿಗಿಂತ ಹೆಚ್ಚಿನ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡಿದ್ದ ಕೆಪಿಎಸ್‌ಸಿಯು ಉದ್ದೇಶಪೂರ್ವಕವಾಗಿ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದೆ ಎಂದು ರಾಜ್ಯ ಸರ್ಕಾರವೇ ಇದೀಗ ಕೆಪಿಎಸ್‌ಸಿ ಮೇಲೆ ಗಂಭೀರ ಆರೋಪ ಮಾಡಿರುವುದು ಸರ್ಕಾರವು ಸಲ್ಲಿಸಿರುವ ಆಕ್ಷೇಪಣೆಯಿಂದ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಮೊದಲನೇ ನಿರ್ದೇಶನದಲ್ಲಿ ಉಲ್ಲೇಖಿಸಿರುವ 5 ಅಂಶಗಳ ಪಾಲನೆಗೆ ಸಂಬಂಧಿಸಿದಂತೆ ಸರ್ಕಾರವು ಈ ಕೆಳಕಂಡಂತೆ ಆಕ್ಷೇಪಣೆ ಸಲ್ಲಿಸಿದೆ.

ಆಕ್ಷೇಪಣೆಯಲ್ಲೇನಿದೆ?

‘ಈ ಮೂರೂ ಬ್ಯಾಚ್‌ನ ಅಧಿಕಾರಿಗಳು ಕಳೆದ 15 ವರ್ಷಗಳಿಂದ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದು ಈಗ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮೊದಲ ನಿರ್ದೇಶನವನ್ನು ಪಾಲಿಸಿದಲ್ಲಿ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ತತ್ಪರಿಣಾಮವಾಗಿ ಈ ಅಧಿಕಾರಿಗಳಿಗೆ ಅಪಾರ ನಷ್ಟವಾಗುತ್ತದೆ. ಹಾಗೂ ಹಿಂದುಳಿದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ. ಮತ್ತು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದೇವೆ,’ ಎಂದು ಸಮರ್ಥಿಸಿಕೊಂಡಿದೆ.

ಎರಡನೇ ನಿರ್ದೇಶನವನ್ನು ಪಾಲಿಸಲಾಗಿದೆ ಎಂದು ಹೆಳಿರುವ ರಾಜ್ಯ ಸರ್ಕಾರವು 2019ರ ಜನವರಿ 25ರಂದು ಹೊರಡಿಸಿರುವ ಹೊಸಪಟ್ಟಿ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಮೂರನೇ ನಿರ್ದೇಶನದ ಪ್ರಕಾರ 2019ರ ಆಗಸ್ಟ್‌ 22ರಂದು ಪರಿಷ್ಕೃತಗೊಂಡ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಆಯ್ಕೆಗೊಂಡ ಕೆಲವು ಅಭ್ಯರ್ಥಿಗಳು ಪರಿಷ್ಕೃತಗೊಂಡ ಅಂತಿಮ ಆಯ್ಕೆಪಟ್ಟಿಯು ಕ್ರಮಬದ್ಧವಾಗಿಲ್ಲ ಎಂದು ಪ್ರಶ್ಜಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಆಕ್ಷೇಪಣೆಯಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದೆ.

ಈ ಹಿನ್ನೆಲೆಯಲ್ಲಿ ಹೊಸ ಪಟ್ಟಿಯನ್ನು ತಯಾರಿಸಬೇಕು ಎಂದು ನ್ಯಾಯಾಲಯವು 2020ರ ಡಿಸೆಂಬರ್‌ 4ರಂದು ಕೆಪಿಎಸ್‌ಸಿಗೆ ಆದೇಶಿಸಿದೆ ಎಂದು ಆಕ್ಷೇಪಣೆ ಅರ್ಜಿಯಲ್ಲಿ ತಿಳಿಸಿರುವ ರಾಜ್ಯ ಸರ್ಕಾರವು 2021ರ ಜನವರಿ 30ರಂದು ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಇದೇ ಪಟ್ಟಿಯನ್ನು2021ರ ಫೆ.5ರಂದು ಸರ್ಕಾರಕ್ಕೆ ಕಳಿಸಿದೆ ಎಂದು ಆಕ್ಷೇಪಣೆಯಲ್ಲಿ ಹೇಳಲಾಗಿದೆ.

1998ನೇ ಬ್ಯಾಚ್‌ನ ಅಧಿಕಾರಿಗಳ ಹಿತ ಕಾಯಲು 2021ರ ಮಾರ್ಚ್‌ 23ರಂದು ವಿಶೇಷ ನಿಯಮಗಳನ್ನು ಜಾರಿಗೊಳಿಸಿದೆ. ಸೇವಾ ಹಿರಿತನ ಮತ್ತು ಪ್ರೊಬೇಷನರಿ, ಬಡ್ತಿ ಹಾಗೂ ವೇತನಕ್ಕೆ ಸಂಬಂಧಿಸಿದಂತೆ ವಿವರಗಳನ್ನು 2021ರ ಜೂನ್‌ 1ರಂದು ಸುತ್ತೋಲೆ ಮೂಲಕ ಹೊರಡಿಸಿದೆ ಎಂದು ಮಾಹಿತಿ ಒದಗಿಸಿದೆ.

6ನೇ ನಿರ್ದೇಶನದ ಪ್ರಕಾರ ಬಾಧಿತ ಅಭ್ಯರ್ಥಿಗಳಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಆದೇಶಿಸಿದೆ. ಅದರಂತೆ ಆಯ್ಕೆಗೊಂಡ ಅನೇಕ ಅಭ್ಯರ್ಥಿಗಳು ಈಗಾಗಲೇ ಕೆಎಟಿಯಲ್ಲಿ ಅರ್ಜಿ ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಿರುತ್ತಾರೆ ಎಂದು ತಿಳಿಸಿದೆ.

ಅಕ್ರಮಗಳ ಮೂಲಕ ನೇಮಕವಾಗಿದ್ದಾರೆ ಎನ್ನಲಾಗಿರುವ (1998,1999,2004) ಆರೋಪಿತ ಕೆಎಎಸ್‌ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಗಿದ್ದ ಹಿಂದಿನ ಮೈತ್ರಿ ಸರ್ಕಾರವು ವಿಧಾನಮಂಡಲದಲ್ಲಿ ಮಂಡಿಸದೆಯೇ ನೇರವಾಗಿ ಸುಗ್ರೀವಾಜ್ಞೆ ಹೊರಡಿಸಿತ್ತು. ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಸೇರಿದಂತೆ ಹಲವು ಶಾಸಕರ ವಿರೋಧದ ನಡುವೆಯೂ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಖಲೀಲ್‌ ಅಹ್ಮದ್‌ ಮತ್ತಿತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

2016ರಲ್ಲಿ ಹೈಕೋರ್ಟ್ ಮತ್ತು 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಗಳನ್ನು ರಾಜ್ಯ ಸರ್ಕಾರವು ಈವರೆವಿಗೂ ಪಾಲಿಸಿಲ್ಲ. ಆದೇಶವನ್ನು ಪಾಲಿಸದೆಯೇ ಜಾರಿಗೊಳಿಸಿರುವ ಸುಗ್ರೀವಾಜ್ಞೆಯು ಗೆಜೆಟೆಡ್‌ ಪ್ರೊಬೇಷನರಿ ಸೇರಿದಂತೆ ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ನೇರ ನೇಮಕಾತಿ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ವಿವರಿಸಿದ್ದರು.

1997ರ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ನಿಯಮಗಳಿಗೆ ಒಳಪಟ್ಟು ಮರು ಆಯ್ಕೆ (ರೀ ಡೂ)ಯನ್ನು ನ್ಯಾಯಾಲಯಗಳು ನೀಡಿರುವ ತೀರ್ಪಿನಂತೆ 1998, 99 ಮತ್ತು 2004ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿಗೆ 1:20 ಮತ್ತು 1:5 ಅನುಪಾತದಲ್ಲಿ (ರಿಟ್‌ ಅರ್ಜಿ ಸಂಖ್ಯೆ 27674/2012) ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಗಳನ್ನು ನಡೆಸಿ ಮರು ಆಯ್ಕೆ ಮಾಡಬೇಕು ಎಂದು ಅರ್ಜಿದಾರ ಖಲೀಲ್‌ ಅಹ್ಮದ್‌ ಮತ್ತಿತರರು ಕೋರಿದ್ದಾರೆ.

ಸುಗ್ರೀವಾಜ್ಞೆ ಜಾರಿಯನ್ನು 1994ರ ಮೇ 3ರಿಂದಲೇ ಪೂರ್ವಾನ್ವಯಗೊಳಿಸಿ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಇದನ್ನೂ ಪ್ರಶ್ನಿಸಿರುವ ಅರ್ಜಿದಾರರು, 1994ರಿಂದ ಈವರೆವಿಗೆ ನಡೆದಿರುವ ಕೆಎಎಸ್‌ ನೇಮಕಾತಿಗಳನ್ನೂ 1:20 ಮತ್ತು 1:5 ಅನುಪಾತದಲ್ಲಿಯೇ ಮರು ಆಯ್ಕೆ ಮಾಡಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು.

2019ರ ಮೇ 27ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಿವಿಲ್‌ ಸೇವೆಗಳ(ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ ರಕ್ಷಣೆ) ಅಧ್ಯಾದೇಶ 2019ರ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಕೈಗೊಂಡಿರುವ ನಿರ್ಣಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಸೇರಿದಂತೆ ಹಲವು ಶಾಸಕರುಗಳು ವಿರೋಧ ವ್ಯಕ್ತಪಡಿಸಿದ್ದರು.

‘ಎಲ್ಲಾ ಶಾಸಕರುಗಳ ಭಾವನೆಗಳು ಏಕ ರೀತಿಯದ್ದಾಗಿರುತ್ತದೆ. ಯಾವುದೇ ಸರ್ಕಾರಿ ನೌಕರರ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರಿ ನಿರ್ಣಯಕ್ಕೆ ನಮ್ಮ ಯಾರ ಆಕ್ಷೇಪವೂ ಇರಕೂಡದು. ಆದರೆ ಸೇವಾ ಜೇಷ್ಠತೆಯನ್ನ ಪರಿಗಣಿಸುವಾಗ ಅತ್ಯಂತ ಜಾಗರೂಕತೆಯಿಂದ ನಾವು ಹೆಜ್ಜೆ ಇಡಬೇಕಾಗುತ್ತದೆ. ಯಾವುದೇ ಒಂದು ಸದುದ್ದೇಶದಿಂದ ಮಾಡುವ ಕೆಲಸ ನಮ್ಮ ಅರಿವಿಲ್ಲದೆ ನಿರಪರಾಧಿಗಳಾದ ಇತರರಿಗೆ ವಿನಾ ಕಾರಣ ಅನ್ಯಾಯ ಆಗದಂತೆ ನಾವು ಜಾಗ್ರತೆ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರುಗಳ ಪತ್ರವನ್ನು ಅವಲೋಕಿಸಿ ಅಗತ್ಯ  ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇನೆ,” ಎಂದು ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಮುಖ್ಯಮಂತ್ರಿಗೆ ಬರೆದಿದ್ದ ಪತ್ರದಲ್ಲಿ ಎಚ್ಚರಿಸಿದ್ದನ್ನು ಸ್ಮರಿಸಬಹುದು.

ಸುಗ್ರೀವಾಜ್ಞೆಯಿಂದ ಹಲವು ಕೆಎಎಸ್‌ ವೃಂದದ ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆ ಆಗುವುದಷ್ಟೇ ಅಲ್ಲದೆ ಅವರಿಗೆ ನ್ಯಾಯಯುತವಾಗಿ ಲಭಿಸಬೇಕಾದ ಬಡ್ತಿಗಳು ವರ್ಷಾನುಗಟ್ಟಲೇ ಮುಂದೂಡಲ್ಪಡುತ್ತದೆ. ಕೆಲವೇ ಅಧಿಕಾರಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೇವಾ ಭದ್ರತೆ ಮತ್ತು ಸೇವಾ ಹಿರಿತನ ನೀಡಿ ಯಾವ ತಪ್ಪೂ ಮಾಡದ ಇತರೆ ಅಧಿಕಾರಿಗಳನ್ನು ಶಿಕ್ಷಿಸುವುದು ಸರಿಯಾದ ಕ್ರಮವಲ್ಲ.  ಹೀಗಾಗಿ ಈ ವಿಷಯದ ಸಾಧಕ ಬಾಧಕಗಳನ್ನು ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಾಧಿತ ಅಧಿಕಾರಿಗಳಿಗೆ ನ್ಯಾಯ ದೊರಕಿಸಬೇಕು ” ಎಂದು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಎಸ್‌ ಎನ್ ಸುಬ್ಬಾರೆಡ್ಡಿ ಅವರು ಸಹ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಅಕ್ರಮ ಫಲಾನುಭವಿಗಳು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ  ಸತ್ಯಶೋಧನಾ ಸಮಿತಿ ವರದಿಯಲ್ಲಿ ಗುರುತಿಸಲಾಗಿರುವ  ಅಧಿಕಾರಿಗಳ ರಕ್ಷಣೆಗೆ ವಿಶೇಷ ಅಧಿನಿಯಮ ರಚಿಸುವುದು ಅಗತ್ಯ ಎಂದು ಮೈತ್ರಿ ಸರ್ಕಾರ ಪ್ರತಿಪಾದಿಸಿತ್ತಲ್ಲದೆ ಆಗಿರುವ ತಪ್ಪುಗಳಿಗೆ  ಅಧಿಕಾರಿಗಳು ಹೊಣೆಯಲ್ಲ; ಅವರದಲ್ಲದ ತಪ್ಪಿಗಾಗಿ ಈ ಅಂತರದ ಅವಧಿಯಲ್ಲಿ ಅವರುಗಳನ್ನು ಸ್ಥಳಾಂತರಿಸುವುದು,  ಸೇವೆಯಿಂದ ತೆಗೆದು ಹಾಕುವುದು ಅಥವಾ ಬೇರೊಂದು ಸೇವೆಗೆ ವರ್ಗಾಯಿಸುವುದು ಸಮರ್ಥನೀಯವಲ್ಲ ಎಂಬ ವಿತಂಡವಾದವನ್ನು ಹಿಂದಿನ ಮೈತ್ರಿ ಸರ್ಕಾರ ಮುಂದೊಡ್ಡಿತ್ತು.

the fil favicon

SUPPORT THE FILE

Latest News

Related Posts