ಹಣಕ್ಕೆ ಬೇಡಿಕೆ ಇಟ್ಟ ಆರೋಪ; ಕರ್ತವ್ಯದಿಂದ ಬಿಡುಗಡೆಗೊಳ್ಳದ ಸಚಿವ ಅಶೋಕ್‌ ಆಪ್ತ ಸಹಾಯಕ?

ಬೆಂಗಳೂರು; ಶೃಂಗೇರಿ ಸಬ್‌ ರಿಜಿಸ್ಟ್ರಾರ್‌ ಅವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಪ್ರಕರಣ ಕುರಿತು ಎಸಿಬಿ ತನಿಖೆ ಚುರುಕುಗೊಂಡಿದ್ದರೂ ಸಚಿವ ಆರ್‌ ಅಶೋಕ್‌ ಅವರು ತಮ್ಮ ಆಪ್ತ ಸಹಾಯಕ ಗಂಗಾಧರ್‌ ಅವರನ್ನು ಇನ್ನೂ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಕರಣ ಕುರಿತು ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಪೊಲೀಸ್‌ ಠಾಣೆಗೆ ದೂರು ದಾಖಲಾಗುತ್ತಿದ್ದಂತೆ ಆಪ್ತ ಸಹಾಯಕ ಗಂಗಾಧರ್‌ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಚಿವ ಅಶೋಕ್‌ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಈವರೆವಿಗೂ ಗಂಗಾಧರ್‌ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರನಾಗಿರುವ ಗಂಗಾಧರ್‌ ಅವರು ಆಪ್ತ ಸಹಾಯಕ ಹುದ್ದೆಯಿಂದ ಬಿಡುಗಡೆಗೊಂಡಿರುವ ಬಗ್ಗೆಯೂ ವಿಧಾನಸಭೆ ಸಚಿವಾಲಯಕ್ಕೆ ಯಾವುದೇ ಅಧಿಕೃತ ಮಾಹಿತಿಯೂ ಇಲ್ಲ ಎಂದು ಗೊತ್ತಾಗಿದೆ. ಈ ನಡುವೆ ತನಿಖಾಧಿಕಾರಿಗಳು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರನ್ನೂ ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಸಚಿವರ ಆಪ್ತ ಸಹಾಯಕ ಕರ್ತವ್ಯದಿಂದ ಗಂಗಾಧರ್‌ ಅವರು ಬಿಡುಗಡೆಗೊಂಡಿದ್ದಲ್ಲಿ ವಿಧಾನಸಭೆ ಸಚಿವಾಲಯದ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಅಲ್ಲಿಯೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್‌ ಅವರು ಒಂದೊಮ್ಮೆ ರಜೆ ಮೇಲೆ ತೆರಳಬೇಕಿದ್ದರೂ ಸಚಿವಾಲಯದ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಶಾಖೆಯ ಮೇಲಾಧಿಕಾರಿ ಅನುಮತಿ ಪಡೆಯಬೇಕು. ಆದರೆ ಈ ಪ್ರಕ್ರಿಯೆಯೂ ನಡೆದಿಲ್ಲ ಎಂದು ಗೊತ್ತಾಗಿದೆ.

ಶೃಂಗೇರಿ ಠಾಣೆಯಲ್ಲಿ ಈಗಾಗಲೇ ಐಪಿಸಿ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾಧರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ಎಸಿಬಿ ಠಾಣೆಗೆ ವರ್ಗಾಯಿಸಿಕೊಳ್ಳಬೇಕು ಎಂದು ಚೆಲುವರಾಜು ಅವರು ದೂರಿನಲ್ಲಿ ಕೋರಿದ್ದಾರೆ. ‘ಎಫ್‌ಐಆರ್‌ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಮೂದಿಸಿರುವ ಅಪರಾಧ ಕೃತ್ಯ ಹಾಗೂ ಐಪಿಸಿ ಅಡಿಯಲ್ಲಿ ನಮೂದಿಸಿರುವ ಅಪರಾಧ ಕೃತ್ಯವನ್ನು ಸೇರ್ಪಡಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದರು.

ಪ್ರಕರಣದ ಹಿನ್ನೆಲೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್‌ ಅಶೋಕ್‌ ಅವರು ಭಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗೆ ಸಂದೇಶ ಕಳಿಸಲಾಗಿತ್ತು. ಆದರೆ ಸಂದೇಶ ಕಳಿಸಿದವ ಇವರಿಗೆ ಪರಿಚಯವಿರಲಿಲ್ಲ. ಇದಾಗಿ 3 ದಿನದ ನಂತರ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂದು ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದರು.

2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು ಶರಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದ ವೇಳೆಯಲ್ಲಿ ಗಂಗಾಧರ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಈ ಬಗ್ಗೆ ನನಗೆ ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗೆ ಇಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.

ಅದೇ ದಿನ ಗಂಗಾಧರ್‌ (ದೂರವಾಣಿ ಸಂಖ್ಯೆ ; 7760666222) 8-30ರ ಸಮಯದಲ್ಲಿ ತನ್ನ ಮೊಬೈಲ್‌ನಿಂದ ವಾಟ್ಸಾಪ್‌ ಧ್ವನಿ ಕರೆ ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್‌ ಎಂಬುವರು ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಅವರು ಆರೋಪಿಸಿದ್ದರು.

the fil favicon

SUPPORT THE FILE

Latest News

Related Posts