ಬಿ ಸಿ ಪಾಟೀಲ್‌ರಿಂದ ಹಣಕ್ಕಾಗಿ ಬೇಡಿಕೆ; ಸಾಕ್ಷ್ಯಗಳಿದ್ದರೂ ರಾಜೀನಾಮೆ ಪಡೆಯಲಿಲ್ಲವೇಕೆ?

ಬೆಂಗಳೂರು; ವರ್ಗಾವಣೆಗೆ ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇರೆಗೆ ಎಚ್‌ ನಾಗೇಶ್‌ ಅವರಿಂದ ರಾಜೀನಾಮೆ ಪಡೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಯ ವರಿಷ್ಠರು, ಅಧಿಕಾರಿ, ಸಿಬ್ಬಂದಿಯಿಂದ ಲಂಚಕ್ಕಾಗಿ ಬೇಡಿಕೆ ಇರಿಸಿದ್ದ ಗುರುತರ ಆರೋಪಕ್ಕೆ ಗುರಿಯಾಗಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್‌  ಅವರಿಂದ ರಾಜೀನಾಮೆ ಪಡೆಯಲು ಧೈರ್ಯ ತೋರಿಲ್ಲ.

ಅಬಕಾರಿ ಸಚಿವರಾಗಿದ್ದ ಎಚ್‌ ನಾಗೇಶ್‌ ಅವರು ಪರಿಶಿಷ್ಟ ಜಾತಿಯವರಾಗಿದ್ದ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ಬಿ ಸಿ ಪಾಟೀಲ್‌ ಅವರ ವಿರುದ್ಧವೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಗಳಿದ್ದರೂ ರಾಜೀನಾಮೆ ಪಡೆದಿಲ್ಲವೇಕೆ, ಅವರಿಂದ ರಾಜೀನಾಮೆ ಪಡೆಯಲು ಯಡಿಯೂರಪ್ಪ ಅವರಿಗೆ ಧೈರ್ಯವಿಲ್ಲವೇ ಎಂಬ ಪ್ರಶ್ನೆಗಳು ಕೃಷಿ ಇಲಾಖೆಯಲ್ಲಿ ಕೇಳಿ ಬಂದಿವೆ.

ಎಚ್‌ ನಾಗೇಶ್‌ ಅವರ ವಿರುದ್ಧ ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ಪುತ್ರಿಯೊಬ್ಬರು ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು. ಆದರೆ ಸಚಿವ ಬಿ ಸಿ ಪಾಟೀಲ್‌ ಅವರ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದ ಹಲವು ಪ್ರಕರಣಗಳು ಮತ್ತು ಹಣ ಸಂದಾಯ ಮಾಡಿದ್ದಾರೆ ಎನ್ನಲಾಗಿರುವ ಅಧಿಕಾರಿ, ಸಿಬ್ಬಂದಿ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಪಾಲರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಸಾಕ್ಷ್ಯಾಧಾರಗಳ ಸಮೇತ ದೂರು ಸಲ್ಲಿಸಿದ್ದರೂ ರಾಜೀನಾಮೆ ಪಡೆದಿಲ್ಲ. ಸಚಿವ ಪಾಟೀಲ್‌ ಅವರು ಲಿಂಗಾಯತ ಸಮುದಾಯಕ್ಕೆ ಸೇರಿರುವುದೇ ರಾಜೀನಾಮೆ ಪಡೆಯದಿರಲು ಮೂಲ ಕಾರಣ ಎನ್ನಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಸಕರ ಪೈಕಿ ಬಿ ಸಿ ಪಾಟೀಲ್‌ ಕೂಡ ಒಬ್ಬರು. ಮುಂಬೈ ಸ್ನೇಹಿತರ ಗುಂಪಿನಲ್ಲಿ ಕಾಣಿಸಿಕೊಂಡು ಅನರ್ಹಗೊಂಡು ನಂತರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆ ನಂತರ ಕೃಷಿ ಇಲಾಖೆ ಸಚಿವರಾಗಿದ್ದರು. ಅಧಿಕಾರಕ್ಕೆ ಬಂದ ಅತ್ಯಲ್ಪ ದಿನಗಳಲ್ಲೇ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಯಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರಲ್ಲದೆ ಆಯಕಟ್ಟಿನ ಅಧಿಕಾರಿಗಳಿಂದ ವರ್ಗಾವಣೆ ಮತ್ತು ಇರುವ ಜಾಗದಲ್ಲಿಯೇ ಮುಂದುವರೆಸಲು ಲಕ್ಷಾಂತರ ರು. ವಸೂಲಿ ಮಾಡಿದ್ದರು ಎಂಬ ಬಲವಾದ ಆರೋಪವಿದ್ದರೂ ಯಡಿಯೂರಪ್ಪ ಮತ್ತು ಬಿಜೆಪಿ, ಸಂಘ ಪರಿವಾರದ ವರಿಷ್ಠರು ಮೌನ ವಹಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಗ್ರೂಪ್‌ ಎ, ಬಿ ಮತ್ತು ಸಿ ಗುಂಪಿನ ಅಧಿಕಾರಿ, ನೌಕರರ ವರ್ಗಾವಣೆಗಾಗಿ ಸಚಿವ ಬಿ ಸಿ ಪಾಟೀಲ್‌ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಚಿವರು ಮತ್ತು ಅವರ ಆಪ್ತಕೂಟ ಅಧಿಕಾರಿಗಳೊಂದಿಗೆ ನಡೆಸಿದ್ದ ಮಾತುಕತೆಯ ಧ್ವನಿ ಮತ್ತು ದೃಶ್ಯಾವಳಿಗಳ ಸಮೇತ ಸಂತ್ರಸ್ತ ಅಧಿಕಾರಿ, ನೌಕರರು ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿಗೂ ಲಿಖಿತ ದೂರು ಸಲ್ಲಿಸಿದ್ದರು.

 

ಈ ಕುರಿತು ‘ದಿ ಫೈಲ್‌’ ಅಕ್ಟೋಬರ್‌ 13ರಂದೇ ವರದಿ ಪ್ರಕಟಿಸಿತ್ತು.

ಬಿ ಸಿ ಪಾಟೀಲ್‌ರಿಂದಲೇ ಹಣಕ್ಕಾಗಿ ಬೇಡಿಕೆ!; ಮುಖ್ಯಮಂತ್ರಿಗೆ ನೌಕರರಿಂದಲೇ ಸಾಕ್ಷ್ಯ?

ಸಚಿವ ಬಿ ಸಿ ಪಾಟೀಲ್ ಅವರ ಹೆಸರು ಬಳಸಿ ಅವರ ಆಪ್ತಕೂಟ ಕೃಷಿ ಇಲಾಖೆ ಅಧಿಕಾರಿ, ನೌಕರರುಗಳಿಂದ ಲಕ್ಷಗಟ್ಟಲೇ ಸುಲಿಗೆ ಮಾಡಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ಸದ್ದು ಮಾಡಿರುವ ಬೆನ್ನಲ್ಲೇ ಇದೇ ಇಲಾಖೆಯ ಗ್ರೂಪ್‌ ಎ , ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ವರ್ಗದ ಅಧಿಕಾರಿ ನೌಕರರ ವರ್ಗಾವಣೆಯಲ್ಲಿಯೂ ಲಂಚಕ್ಕಾಗಿ ಬೇಡಿಕೆ ಇರಿಸಲಾಗಿತ್ತು ಎಂಬ ಮಾಹಿತಿಯನ್ನು ಸ್ವತಃ ಕೆಲ ಅಧಿಕಾರಿ, ನೌಕರರುಗಳೇ ಈ ಕುರಿತು ಒಂದಷ್ಟು ಅಧಿಕಾರಿಗಳು ಲಿಖಿತವಾಗಿ ಮುಖ್ಯಮಂತ್ರಿಗೆ 2020ರ ಜುಲೈ 1ರಂದು ಪತ್ರ ಮುಖೇನ ಗಮನಕ್ಕೆ ತಂದಿದ್ದರು.

‘2020-21ನೇ ಸಾಲಿನ ಗ್ರೂಪ್‌ ಎ, ಗ್ರೂಪ್‌ ಮತ್ತು ಗ್ರೂಪ್‌ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಸಚಿವ ಬಿ ಸಿ ಪಾಟೀಲ್‌ ಅವರ ಆಪ್ತ ಕಾರ್ಯದರ್ಶಿ ಕೆಎಎಸ್‌ ಅಧಿಕಾರಿ ಸಿ ಎಲ್‌ ಶಿವಕುಮಾರ್‌, ಎ ಸಿ ಮಂಜುನಾಥ್‌, ದಯಾನಂದ ಎಂಬುವರಿಗೆ ಹಣ ಸಂದಾಯ ಮಾಡಿರುವ ಪಟ್ಟಿಯನ್ನೂ ಕೃಷಿ ಇಲಾಖೆ ಸಿಬ್ಬಂದಿಗಳು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದರು.

ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್‌ 50 ಲಕ್ಷ, ಅಪರ ನಿರ್ದೇಶಕರುಗಳು 50 ಲಕ್ಷ, ಬೆಳಗಾವಿ ಜಂಟಿ ನಿರ್ದೇಶಕರು (ಜಿಲಾನಿ ಮತ್ತು ಪಾಟೀಲ್‌) 2 ಕೋಟಿ, ಕಲ್ಬುರ್ಗಿ ಜಂಟಿ ನಿರ್ದೇಶಕ (ಸೂಗೂರು) 1 ಕೋಟಿ, ರೂಪಾದೇವಿ 75 ಲಕ್ಷ, ಅಪರ ನಿರ್ದೇಶಕರು( ದಿವಾಕರ) 1 ಕೋಟಿ, ಚಿಕ್ಕಬಳ್ಳಾಪುರ ಜಂಟಿ ನಿರ್ದೇಶಕರು (ರೂಪ) 50 ಲಕ್ಷ, ದಾವಣಗೆರೆ ಜಂಟಿ ನಿರ್ದೇಶಕರು 50 ಲಕ್ಷ, ಜಂಟಿ ನಿರ್ದೇಶಕರು ಹಾವೇರಿ (ಮಂಜುನಾಥ್‌) 1 ಕೋಟಿ ನೀಡಿದ್ದಾರೆ ಎಂಬುದನ್ನು ಕೃಷಿ ಇಲಾಖೆ ಸಿಬ್ಬಂದಿ ಮುಖ್ಯ ಕಾರ್ಯದರ್ಶಿಗೆ ಪಟ್ಟಿ ಸಮೇತ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಆಪ್ತ ಕಾರ್ಯದರ್ಶಿ ಶಿವಕುಮಾರ್‌, ದಯಾನಂದ್‌ ಮತ್ತು ಮಂಜುನಾಥ್‌ ಎಂಬುವರು ಇಲಾಖೆಯ ಅಧಿಕಾರಿ, ನೌಕರರುಗಳಿಗೆ ವಾಟ್ಸಾಪ್‌ ಕರೆ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದ ನೌಕರರು, ಕೃಷಿ ಯಾಂತ್ರೀಕರಣ, ಕೃಷಿ ಪರಿಕರ, ಕೀಟನಾಶಕಗಳು, ಸ್ಪ್ರಿಂಕಲ್‌/ಡ್ರಿಪ್‌ಗಳ ಅನುದಾನ ನೀಡುವುದರಲ್ಲಿಯೂ ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

‘ನಾವು ಕೆಳಮಟ್ಟದ ಇಲಾಖೆಯ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು ನಮ್ಮ ಸಂಬಳದಲ್ಲಿ ನಮ್ಮ ಸಂಸಾರ ನಡೆಸುವುದೇ ಕಷ್ಟಕರವಾಗಿದೆ. ನಮಗೆ ಏನಾದರೂ ಮಾಡಿದರೆ ಹೇಗೆ ಎಂದು ಹಣ ಹೊಂದಿಸುತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ರೈತರ ಆತ್ಮಹತ್ಯೆ ಬದಲು ರೈತ ಇಲಾಖೆ ಅಧಿಕಾರಿಗಳು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಇದರಿಂದ ಮಾನಸಿಕ ಹಿಂಸೆ ಅನುಭವಿಸುವುದಕ್ಕಿಂತ ಅದೇ ಮೇಲು,’ ಎಂದು ಅಧಿಕಾರಿ, ನೌಕರರು ಅಳಲು ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.

‘ಅನುದಾನ ಯಾರಿಗೆ ಕೊಡಬೇಕು ಎಂದು ಏಜೆಂಟರುಗಳು ಮಂತ್ರಿಗಳ ಕಚೇರಿ, ವಸೂಲಿಗಾಗಿ ಪ್ರತ್ಯೇಕ ಕಚೇರಿ ತೆರೆದು ಯಾರು ಹೆಚ್ಚಿನ ಕಮಿಷನ್‌ ನೀಡುತ್ತಾರೋ ಉಪಕರಣಗಳು ಗುಣಮಟ್ಟದಿಂದ ಕೂಡಿಲ್ಲದಿದ್ದರೂ ಆಪ್ತ ಕಾರ್ಯದರ್ಶಿ, ಖಾಸಗಿ ಏಜೆಂಟರುಗಳು ಸೂಚಿಸುವ ವ್ಯಕ್ತಿಗಳಿಗೆ ಜಂಟಿ ನಿರ್ದೇಶಕರುಗಳು ಇಂಡೆಂಟ್‌ಗಳನ್ನು ನೀಡಬೇಕು. ಎಲ್ಲದಕ್ಕೂ ಮಂತ್ರಿಗಳ ಹೆಸರನ್ನು ಹೇಳಲಾಗುತ್ತಿದೆ,’ ಎಂದು ದೂರಿನಲ್ಲಿ ಆರೋಪಿಸಿದ್ದರು.

the fil favicon

SUPPORT THE FILE

Latest News

Related Posts